ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ಕೋಟೆಗುಡ್ಡದ ಬಳಿ ಹೊಲದಲ್ಲಿ ಚಿರತೆ ಬುಧವಾರ ಸಂಜೆ ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೊಂದಿಕೊಂಡಿರುವ ರಕ್ಷಿತ ಅರಣ್ಯದ ಬಳಿ ಜಾನ್ ಪುನೀತ್ ಎಂಬ ರೈತ ಹೊಲಕ್ಕೆ ಹೋದಾಗ ಚಿರತೆ ಪ್ರತ್ಯಕ್ಷವಾಗಿರುವುದನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕಾರ್ಯಪ್ರವೃತ್ತರಾದ ಸಿಬ್ಬಂದಿ ರೈತನೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಚಿರತೆಯ ಸುಳಿವು ಕಂಡು ಬಂದಿಲ್ಲ. ಚಿರತೆ ಅಲ್ಲಿಯೇ ಇರುವುದನ್ನು ಖಚಿತಪಡಿಸಿಕೊಂಡು ಅದನ್ನು ಸೆರೆ ಹಿಡಿಯಲು ಬೋನ್ ಅಳವಡಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಕಾಂತೇಶ ಬೇಲೂರು ಮಾಹಿತಿ ನೀಡಿದ್ದಾರೆ.
ಆಣೂರು ಬಳಿ ಚಿರತೆಗೆ ನಾಯಿ ಬಲಿ: ತಾಲ್ಲೂಕಿನ ಆಣೂರು ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಹೊಟ್ಟೆ ಬಗೆದಿರುವ ನಾಯಿಯ ಕಳೆಬರಹ ಎರಡು ದಿನಗಳ ಹಿಂದೆ ಪತ್ತೆಯಾಗಿದೆ. ಚಿರತೆ ನಾಯಿಯನ್ನು ಬೇಟೆಯಾಡಿದ್ದರೆ ಕಳೆಬರಹವನ್ನು ಬಿಟ್ಟು ಹೋಗುತ್ತಿರಲಿಲ್ಲ. ನಾಯಿಯನ್ನು ಬೇಟೆಯಾಡಿರುವುದು ತೋಳ ಆಗಿರಬಹುದು ಎನ್ನುವ ಅನುಮಾನವನ್ನು ಅರಣ್ಯ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.