ADVERTISEMENT

ಹಸಿರು ಕ್ರಾಂತಿಗೆ ನಾಂದಿ ಹಾಡಲಿ

ಅಗಡಿ ಅಕ್ಕಿಮಠದ ಪರಿಸರ ಜಾಗೃತಿ ಪಾದಯಾತ್ರೆಗೆ ಚಾಲನೆ: ಸತೀಶ ಕುಲಕರ್ಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 16:13 IST
Last Updated 18 ಏಪ್ರಿಲ್ 2022, 16:13 IST
ಹಾವೇರಿ ನಗರದ ವಡ್ಡಮ್ಮ ದೇವಿ ದೇವಸ್ಥಾನದ ಬಳಿ ಸೋಮವಾರ ಪರಿಸರ ಜಾತ್ರೆ-2022ರ ಅಂಗವಾಗಿ ಹಮ್ಮಿಕೊಂಡಿದ್ದ ‘ಪರಿಸರ ಜಾಗೃತಿ ಪಾದಯಾತ್ರೆ’ಗೆ ಚಾಲನೆ ನೀಡಲಾಯಿತು. ಶಾಸಕ ನೆಹರು ಓಲೇಕಾರ, ಸಾಹಿತಿ ಸತೀಶ ಕುಲಕರ್ಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಇದ್ದಾರೆ
ಹಾವೇರಿ ನಗರದ ವಡ್ಡಮ್ಮ ದೇವಿ ದೇವಸ್ಥಾನದ ಬಳಿ ಸೋಮವಾರ ಪರಿಸರ ಜಾತ್ರೆ-2022ರ ಅಂಗವಾಗಿ ಹಮ್ಮಿಕೊಂಡಿದ್ದ ‘ಪರಿಸರ ಜಾಗೃತಿ ಪಾದಯಾತ್ರೆ’ಗೆ ಚಾಲನೆ ನೀಡಲಾಯಿತು. ಶಾಸಕ ನೆಹರು ಓಲೇಕಾರ, ಸಾಹಿತಿ ಸತೀಶ ಕುಲಕರ್ಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಇದ್ದಾರೆ   

ಹಾವೇರಿ: ಪಾದಯಾತ್ರೆಗೆ ಭವ್ಯ ಇತಿಹಾಸವಿದೆ. ಪಾದಯಾತ್ರೆಗಳು ದೇಶದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಉಂಟು ಮಾಡಿದ ಇತಿಹಾಸಗಳು ನಮ್ಮ ಕಣ್ಣಮುಂದೆ ಇವೆ.ಪರಿಸರ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹಮ್ಮಿಕೊಂಡಿರುವ ‘ಪರಿಸರ ಜಾಗೃತಿ ಪಾದಯಾತ್ರೆ’ಯು ಹಸಿರುಕ್ರಾಂತಿಗೆ ನಾಂದಿ ಹಾಡಲಿ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದ ವಡ್ಡಮ್ಮ ದೇವಿ ದೇವಸ್ಥಾನದ ಬಳಿ ಸೋಮವಾರ ಪರಿಸರ ಜಾತ್ರೆ-2022ರ ಅಂಗವಾಗಿ 31 ವಾರ್ಡ್‌ಗಳಲ್ಲಿ ಸಂಚರಿಸುವ ‘ಪರಿಸರ ಜಾಗೃತಿ ಪಾದಯಾತ್ರೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿ ಕೈಗೊಂಡ ಪಾದಯಾತ್ರೆ, ಆಚಾರ್ಯ ವಿನೋಭಾ ಬಾವೆ ಅವರ ಭೂದಾನಕ್ಕೆ ಕೈಗೊಂಡ ಪಾದಯಾತ್ರೆ, ಹೀಗೆ ಆಯಾ ಕಾಲಘಟ್ಟದಲ್ಲಿ ನಡೆದ ಪಾದಯಾತ್ರೆಗಳು ಹೊಸ ಬದಲಾವಣೆಗೆ ನಾಂದಿಹಾಡಿವೆ ಎಂದರು.

ADVERTISEMENT

ದಿನದಿಂದ ದಿನಕ್ಕೆ ನಿಸರ್ಗದ ಪರಿಸರದ ಜೊತೆಗೆ ನಮ್ಮ ಸಾಮಾಜಿಕ ಪರಿಸರವು ಸಹ ಅಪಾಯಕರಿ ಹಂತಕ್ಕೆ ಹೋಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪರಿಸರದ ಜೊತೆಗೆ ಸಾಮಾಜಿಕ ಪರಿಸರದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಅಭಿಪ್ರಾಯ ಪಟ್ಟರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಪರಿಸರದ ಉಳಿವಿಗಾಗಿ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹಮ್ಮಿಕೊಂಡಿರುವ ಪರಿಸರ ಜಾತ್ರೆ ಉಪಯುಕ್ತ ಕಾರ್ಯವಾಗಿದ್ದು, ಪರಿಸರವನ್ನು ಕಾಪಾಡಲು ನಗರದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಡಾ.ಸಂಜಯ ಡಾಂಗೆ ಆಗಮಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ವಹಿಸಿದ್ದರು. ಕೃಷ್ಣ ಜವಳಿ ನಿರೂಪಿಸಿ, ಸ್ವಾಗತಿಸಿದರು. ಪಾದಯಾತ್ರೆಯು ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.