ADVERTISEMENT

ತಡಸ | ಗೋವಿನ ಜೋಳಕ್ಕೆ ತಾಮ್ರ ರೋಗ: ಸತತ ಮಳೆಗೆ ಹಾಳಾದ ಬೆಳೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:58 IST
Last Updated 6 ಜುಲೈ 2025, 2:58 IST
ದುಂಡ ಶಿ ಹೋಬಳಿಯ ಗೋವಿನ ಜೋಳ ಬೆಳೆಯು ಸತತ ಮಳೆಗೆ ಹಾನಿಯಾಗುವುದು.
ದುಂಡ ಶಿ ಹೋಬಳಿಯ ಗೋವಿನ ಜೋಳ ಬೆಳೆಯು ಸತತ ಮಳೆಗೆ ಹಾನಿಯಾಗುವುದು.   

ತಡಸ (ದುಂಡಶಿ): ದುಂಡಶಿ ಹೋಬಳಿಯಲ್ಲಿ ಸತತವಾಗಿ ಒಂದು ವಾರದಿಂದ ಸುರಿಯುತ್ತಿದೆ. ಮಳೆ ಜಾಸ್ತಿಯಾದ ಪರಿಣಾಮ ಜೋಳಕ್ಕೆ ತಾಮ್ರ ರೋಗ ಹಾಗೂ ಕೆಂಪು ಬಂದಿದ್ದು, ಜೋಳ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದು ಬೇಸರಕ್ಕೆ ಕಾರಣವಾಗಿದೆ.

2025ರ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಇಲ್ಲಿಯವರೆಗೆ ಸರಾಸರಿ 201.8 ಮಿ.ಮೀಟರ್‌ ವಾಡಿಕೆ ಮಳೆ ಆಗುತ್ತಿತ್ತು. ಆದರೆ, ಈಗ 262.0 ಮಿಲಿಮೀಟರ್‌ ಮಳೆಯಾಗಿದ್ದು, ಶೇಕಡಾ 30% ರಷ್ಟು ಹೆಚ್ಚು ಮಳೆಯಾಗಿದೆ. ಮೆಕ್ಕೆಜೋಳ, ಶೇಂಗಾ, ಸೋಯಾಬೀನ್ ಬೆಳೆಗಳ ಬಿತ್ತನೆ ಶೇಕಡಾ 90% ರಷ್ಟು ಮುಕ್ತಾಯಗೊಂಡಿದ್ದು ಬೆಳೆಗಳು ವಿವಿಧ ಬೆಳವಣಿಗೆ ಹಂತದಲ್ಲಿ ಹಾನಿಗೊಂಡಿದೆ.

ಕಳೆದ ವರ್ಷವೂ ಭಾರಿ ಪ್ರಮಾಣದ ಮಳೆಯಿಂದ ರೈತರು ಬೆಳೆ ಹಾನಿ ಅನುಭವಿಸಿದ್ದು ಈ ವರ್ಷವೂ ಅಪಾರ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ರೈತರು ಹಾಕಿರುವ ಬೆಳೆ ಹಾಳಾಗಿದೆ. ಸಾಲ ಸೊಲ ಮಾಡಿ ಹಾಕಿರುವ ಹಣವು ಸಿಗದಂತಾಗಿ ಬಡ್ಡಿ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

’ಒಂದು ಎಕರೆ ಭೂಮಿ ಹಸನು ಮಾಡಿ ಬೀಜ ಗೊಬ್ಬರ ಹಾಕಿ ಮತ್ತು ಒಂದು ತಿಂಗಳ ನಂತರ 6- 8 ಬಾರಿ ಗೊಬ್ಬರ ಹಾಕಿ ಒಂದು ಎಕರೆಗೆ ₹35 ರಿಂದ ₹40 ಸಾವಿರ ಖರ್ಚು ಮಾಡಿದ್ದೇನೆ. ಪ್ರತಿ ವರ್ಷವೂ ಬೆಳೆಯು ಕೈಗೆ ಬರದಂತಾಗಿದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಕೇಶಪ್ಪ ಹೇಳಿದರು.

’ಸತತವಾಗಿ ಸುರಿಯುತ್ತಿರುವ ಮಳೆಗೆ ರೈತರೆಲ್ಲರೂ ಚಿಂತೆಗೀಡಾಗಿದ್ದು ಸ್ಥಳೀಯ ಶಾಸಕರಾಗಲಿ ಜನಪ್ರತಿನಿಧಿಗಳಾಗಲಿ ಇನ್ನೂವರೆಗೆ ರೈತರ ಬೆಳೆ ವೀಕ್ಷಣೆ ಮಾಡಲು ಬಾರದೇ ಇರುವುದು ರೈತರ ಆತ್ಮಸ್ಥೈರ್ಯಕ್ಕೆ ಕಳೆದುಕೊಳ್ಳಲು ಕಾರಣವಾಗುತ್ತಿದೆ’ ಎಂದು ಈರಣ್ಣ ಹೇಳಿದರು.

’ಈಗಾಗಲೇ ಬಿತ್ತಿರುವ ಬೆಳೆಯು ಸಂಪೂರ್ಣ ಹಾನಿಯಾಗಿದ್ದು ಸರ್ಕಾರ ರೈತರಿಗೆ ಪ್ರತಿ ಎಕರೆಗೆ 10 ಸಾವಿರದಂತೆ ಪರಿಹಾರ ನೀಡಬೇಕು. ಇಲ್ಲವಾದರೆ ತಾಲ್ಲೂಕು ಮಟ್ಟದಲ್ಲಿ ಉಗ್ರ ಹೋರಾಟ ಮಾಡುವುದಾಗಿ’ ದುಂಡಶಿ ಹೋಬಳಿಯ ರೈತರು ಎಚ್ಚರಿಸಿದ್ದಾರೆ.

’ಸತತ ಮಳೆಗೆ ಗೋವಿನ ಜೋಳ ಬೆಳೆಯು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಇದಕ್ಕೆ ನೀರಿನಲ್ಲಿ ಕರಗುವ 19:19:19 /ಪೊಟ್ಯಾಷ್ 0:0:50/13:0:45 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 1.5 ಗ್ರಾಂ ಬೆರೆಸಿ ಬೆಳೆಗಳ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಬೆಳೆಗಳು ಬೇಗನೆ ಚೇತರಿಸಿಕೊಳ್ಳುತ್ತವೆ’ ಎಂದು ಶಿಗ್ಗಾವಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.