ADVERTISEMENT

ಹಾವೇರಿ ಜಿಲ್ಲೆಯಲ್ಲಿ ಮಟ್ಕಾ ಅಬ್ಬರ; ಬಡ ಕುಟುಂಬಗಳು ತತ್ತರ– ನಿಲ್ಲದ ದಂಧೆ

ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳೇ ಟಾರ್ಗೆಟ್‌: ನಿರಂತರ ದಾಳಿ ನಡುವೆಯೂ ನಿಲ್ಲದ ದಂಧೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 4:45 IST
Last Updated 7 ನವೆಂಬರ್ 2022, 4:45 IST
ಕಲ್ಯಾಣ್‌ ಮಟ್ಕಾ ಚಾರ್ಟ್‌ 
ಕಲ್ಯಾಣ್‌ ಮಟ್ಕಾ ಚಾರ್ಟ್‌    

ಹಾವೇರಿ: ‘ಸಂತರ–ಶರಣರ ನಾಡು’ ಎಂದೇ ಹೆಸರಾದ ಹಾವೇರಿ ಜಿಲ್ಲೆಗೆ ಮಟ್ಕಾ ಮತ್ತು ಜೂಜಾಟದ ದಂಧೆಗಳು ಕಳಂಕ ಮೆತ್ತಿವೆ. ಮಟ್ಕಾ (ಓಸಿ) ಮಾಯಾಜಾಲಕ್ಕೆ ಬಡ ಕೂಲಿಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸಿಲುಕಿ ಒದ್ದಾಡುತ್ತಿದ್ದಾರೆ. ಪೊಲೀಸರ ನಿರಂತರ ದಾಳಿ ನಡುವೆಯೂ ಮಟ್ಕಾ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ.

ಮಟ್ಕಾ, ಇಸ್ಪೀಟ್‌, ಬೆಟ್ಟಿಂಗ್‌ ಚಟಕ್ಕೆ ಬಿದ್ದ ಕಾರ್ಮಿಕರು ದುಡಿದ ಹಣವನ್ನೆಲ್ಲ ಈ ದಂಧೆಗೆ ಸುರಿದು ಬರಿಗೈಯಲ್ಲಿ ಮನೆಗೆ ಮರಳುತ್ತಿದ್ದಾರೆ. ಕಡೆಗೆ ಹೆಂಡತಿಯರ ತಾಳಿಯನ್ನೂ ಅಡವಿಟ್ಟು ಜೂಜಾಟವಾಡುತ್ತಾರೆ. ಕೆಲವು ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳನ್ನು ಮರೆತು ಬುಕ್ಕಿಂಗ್‌ ಸೆಂಟರ್‌ಗಳ ಸುತ್ತಮತ್ತ ಅಲೆದಾಡುತ್ತಿದ್ದಾರೆ. ಎಷ್ಟೋ ಬಡಕುಟುಂಬಗಳು ಬೀದಿಗೆ ಬಿದ್ದಿವೆ. ಪೊಲೀಸರು ಕಡಿವಾಣ ಹಾಕಿದ್ದಾರೆ ಎಂದು ಮೇಲ್ನೋಟಕ್ಕೆ ಕೆಲವರಿಗೆ ಅನಿಸಿದರೂ, ಈ ಕರಾಳ ದಂಧೆ ಗುಪ್ತಗಾಮಿನಿಯಂತೆ ಹಳ್ಳಿ–ಹಳ್ಳಿಗೂ ವ್ಯಾಪಿಸುತ್ತಲೇ ಇದೆ.

ಪೊಲೀಸರಿಗೆ ಸವಾಲು

ADVERTISEMENT

ಈ ಮೊದಲು ಮಟ್ಕಾ ಆಟದಲ್ಲಿ ಚೀಟಿ ಬರೆಯುತ್ತಿದ್ದರು. ಈಗ ಅವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ವಾಟ್ಸ್‌ಆ್ಯಪ್‌, ಗೂಗಲ್‌ ಪೇ, ಫೋನ್‌ ಪೇ ಸೇರಿದಂತೆ ಆನ್‍ಲೈನ್ ಮೂಲಕವೇ ಹಣದ ವಹಿವಾಟು ಹೆಚ್ಚಾಗಿ ನಡೆಯುತ್ತಿದ್ದು, ದಾಳಿ ಮಾಡಿದ ವೇಳೆ ಯಾವ ದಾಖಲೆಗಳೂ ಸಿಗುತ್ತಿಲ್ಲ. ದಂಧೆ ನಡೆಸುವ ಕಿಂಗ್‌ಪಿನ್‌ಗಳು ಗೋವಾ ಮತ್ತು ಮುಂಬೈನಲ್ಲಿ ಕುಳಿತು ಆಡವಾಡಿಸುತ್ತಾರೆ. ಇದರಿಂದ ದಂಧೆಕೋರರನ್ನು ಸೆರೆ ಹಿಡಿಯಲು ಪೊಲೀಸರಿಗೆ ದೊಡ್ಡ ಸವಾಲಾಗಿದೆ ಎನ್ನಲಾಗಿದೆ.

ಸವಣೂರು ತಾಲ್ಲೂಕಿನಗ್ರಾಮೀಣ ಪ್ರದೇಶದ ಮಹಿಳೆಯರು ಮಟ್ಕಾ ಮತ್ತು ಜೂಜಾಟದ ಅಡ್ಡೆಗಳನ್ನು ಬಂದ್‌ ಮಾಡುವಂತೆ ಪ್ರತಿಭಟನೆ ಕೈಗೊಂಡು, ಪೊಲೀಸ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಜೂಜು ಅಡ್ಡೆಗಳ ಮೇಲೆ ಆಗಾಗ್ಗೆ ದಾಳಿ ನಡೆಸಿದರೂ ದಂಧೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ.

ದಂಧೆಗೆ ಕಡಿವಾಣ ಬಿದ್ದಿಲ್ಲ!

ಹಾನಗಲ್ ತಾಲ್ಲೂಕಿನಲ್ಲಿ ಮಟ್ಕಾ (ಓಸಿ) ಆಟ ನಿಯಂತ್ರಿಸುವಲ್ಲಿ ವ್ಯವಸ್ಥೆ ವಿಫಲವಾಗುತ್ತಿದೆ. ಮಟ್ಕಾ ಚೀಟಿ ಬರೆಯುವ ಏಜೆಂಟರ ವಿರುದ್ಧ ಆಗಾಗ್ಗೆ ಹಾನಗಲ್ ಮತ್ತು ಆಡೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣಗಳು ದಾಖಲಾದರೂ ದಂಧೆಗೆ ಕಡಿವಾಣ ಬಿದ್ದಿಲ್ಲ.

ಹಾನಗಲ್ ಸೇರಿದಂತೆ ತಾಲ್ಲೂಕಿನ ದೊಡ್ಡ ಗ್ರಾಮಗಳಾದ ಅಕ್ಕಿಆಲೂರ, ಆಡೂರ, ಚಿಕ್ಕಾಂಶಿ ಹೊಸೂರ ಮತ್ತಿತರ ಭಾಗದಲ್ಲಿ ಓಸಿ ಬರೆಯುವ ಏಜೆಂಟರು ಇದ್ದಾರೆ. ಇವರನ್ನು ನಿಭಾಯಿಸುವ ಬುಕ್ಕಿ ಅಕ್ಕಿಆಲೂರಿನಲ್ಲಿ ಇರುತ್ತಾನೆ ಎಂಬ ಮಾತಿದೆ. ಪೊಲೀಸರು ದಾಳಿ ಮಾಡಿದಾಗ ಮಟ್ಕಾ ಆಟ ಸಮೀಪದ ಶಿರಸಿ, ಮುಂಡಗೋಡ ತಾಲ್ಲೂಕಿನ ಗ್ರಾಮಗಳಿಗೆ ಶಿಫ್ಟ್‌ ಆಗುತ್ತದೆ.

ಬ್ಯಾಡಗಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಇನ್ನೂ ಕದ್ದು ಮುಚ್ಚಿ ಮಟ್ಕಾ ಬರೆಯುತ್ತಿದ್ದಾರೆ. ಬಹಳಷ್ಟು ಜನರು ಪಣಕ್ಕೆ ಹಚ್ಚಿ ಹಣ ಕಳೆದುಕೊಂಡಿದ್ದಾರೆ. ತಾಲ್ಲೂಕಿನ ಕದರಮಂಡಲಗಿ ಶಿಡೇನೂರ, ಮುಂತಾದೆಡೆ ದಾಳಿ ನಡೆದಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದುರೈತ ಮುಖಂಡ ಕಿರಣಕುಮಾರ ಗಡಿಗೋಳ ಹೇಳಿದರು.

ಮಟ್ಕಾ ಬಗ್ಗೆ ವಿಧಾನಸೌಧಕ್ಕೆ ಪತ್ರ

ಹಿರೇಕೆರೂರು: ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಓಸಿ, ಮಟ್ಕಾ ದಂಧೆ ಬಗ್ಗೆ ಜಿಲ್ಲೆಯ ವ್ಯಕ್ತಿಯೊಬ್ಬರು ವಿಧಾನಸೌಧಕ್ಕೆ ಈಚೆಗೆ ಪತ್ರ ಬರೆದು, ದಂಧೆಯ ಕರಾಳ ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.ನಂತರ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಂಡು ಕೆಲ ದಿನಗಳ ಕಾಲ ದಂಧೆಯನ್ನು ಬಂದ್ ಮಾಡಿತ್ತು. ಹಲವು ಬುಕ್ಕಿಗಳು ದೀಪಾವಳಿ ನಂತರ ಸದ್ದಿಲ್ಲದೇ ತಮ್ಮ ದಂಧೆಯನ್ನು ಪ್ರಾರಂಭಿಸಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ನಂಬರ್‌ ಬರುವವರೆಗೆ ಊಟವಿಲ್ಲ, ನಿದ್ದೆಯಿಲ್ಲ!

ಗುತ್ತಲ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಗ್ರಾಮದ ಹೋಟೆಲ್, ಪಾನ್‍ಶಾಪ್‍ಗಳಲ್ಲಿ ಚೀಟಿ ಮೂಲಕ ತಮ್ಮ ನಂಬರ್‌ಗಳನ್ನು ಬರೆಸಿ ಹೊಗುತ್ತಾರೆ. ಮಟ್ಕಾ ಆಡುವುದು ಈ ಭಾಗದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ನಂಬರ್ ಬರೆಸಿ ಬಂದ ವ್ಯಕ್ತಿಗಳು ಓಪನ್ ನಂಬರ್ ಬರುವವರೆಗೂ ಊಟ ಮಾಡುವುದಿಲ್ಲ. ಕ್ಲೋಸ್‌ ನಂಬರ್ ಬರುವವರೆಗೂ ನಿದ್ದೆ ಮಾಡುವುದಿಲ್ಲ. ಮಟ್ಕಾ ದಂಧೆಯಿಂದ ಯುವಕರು ಮದ್ಯ ವ್ಯಸನಿಗಳಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

‘ಈ ಭಾಗದಲ್ಲಿ ಮಟ್ಕಾ ಆಡುವ ಮತ್ತು ನಂಬರ್ ಬರೆಸಿಕೊಳ್ಳುವ ಯುವಕರನ್ನು ಗುರುತು ಹಚ್ಚಿ ಹಲವಾರು ಬಾರಿ ದಾಳಿ ಮಾಡಿ ಅಂಥವರ ಮೇಲೆ ಪ್ರಕರಣ ದಾಖಲು ಮಾಡಿದ್ದೇವೆ. ಈ ವರ್ಷದ ಅವಧಿಯಲ್ಲಿ ಒಟ್ಟು 12 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದೇವೆ’ ಎಂದು ಗುತ್ತಲ ಪೊಲೀಸ್‌ ಠಾಣೆಯ ಪಿಎಸ್‌ಐ ಜಗದೀಶ ಜಿ. ಹೇಳಿದರು.

ತುಂಗಭದ್ರಾ ತೀರದಲ್ಲಿ ಬುಕ್ಕಿಗಳದ್ದೇ ಹಾವಳಿ

‘ರಾಣೆಬೆನ್ನೂರಿನ ತಾಲ್ಲೂಕಿನ ತುಂಗಭದ್ರಾ ನದಿ ತೀರದ ಪ್ರದೇಶಗಳಲ್ಲಿ ಮಟ್ಕಾ, ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.ಓಸಿ ಆಟದಿಂದ ಹಲವು ಮನೆತನಗಳು ಹಾಳಾಗಿವೆ. ಮೈತುಂಬ ಸಾಲ ಮಾಡಿಕೊಂಡು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡ್ತಿ ತಾಳಿ ಸಹಿತ ಬಿಡುವುದಿಲ್ಲ. ಇದರಿಂದ ಮಹಿಳೆಯರು ರೋಸಿ ಹೋಗಿದ್ದಾರೆ. ಕುಡುಕರ ಹಾವಳಿ, ಜೂಜಾಟ, ಓಸಿಯಿಂದ ಕುಟುಂಬದ ನೆಮ್ಮದಿ ಹಾಳಾಗಿದೆ’ ಎನ್ನುತ್ತಾರೆ ಮುಷ್ಟೂರಿನ ನಿವಾಸಿಗಳಾದ ಶಾಂತಮ್ಮ ಹಿರೇಮರದ, ನಾಗಮ್ಮ ಜಾಡರ್, ರೂಪಾ ನಾಯ್ಕ.

ಕುಮಾರಪಟ್ಟಣ ಮಟ್ಕಾದ ‘ಹಾಟ್‌ಸ್ಪಾಟ್‌’

‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎನಿಸಿದ ಕುಮಾರಪಟ್ಟಣದ ಆಸುಪಾಸಿನಲ್ಲಿ ಅಕ್ರಮ ಮರಳು ಗಣಿಗಾರಿಕೆ, ಓಸಿ, ಇಸ್ಪೀಟ್‌ ಮುಂತಾದ ಅಕ್ರಮ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಈ ಪಟ್ಟಣದ ಸುತ್ತಮುತ್ತಲಿನ ಕೆಲವು ಹೋಟೆಲ್‌, ಕಿರಾಣಿ ಅಂಗಡಿ, ಬೀಡಾ ಶಾಪ್‌, ಸೆಲೂನ್‌ ಶಾಪ್‌, ಟೀ ಸ್ಟಾಲ್‌, ಗೂಡಂಗಡಿ, ಡಾಬಾ, ಕ್ಲಬ್‌ ಮುಂತಾದವು ಜೂಜಾಟಗಳ ಚರ್ಚಾ ಕೇಂದ್ರವಾಗಿವೆ.

ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರು ಟೊಂಕ ಕಟ್ಟಿ ನಿಂತರೂ ದಂಧೆಕೋರರು ಊಸರವಳ್ಳಿ ಬಣ್ಣ ಬದಲಾಯಿಸಿದಂತೆ ಹೊಸ ವರಸೆಯೊಂದಿಗೆ ತಮ್ಮ ಅಕ್ರಮಗಳ ಹಾದಿ ಬದಲಿಸುತ್ತಲೇ ಇದ್ದಾರೆ. ಈವರೆಗೂ ಜೂಜಿನ ಮೋಜನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಗೆ ಬಗೆಯ ಕಾರುಗಳು ಕುಮಾರಪಟ್ಟಣಕ್ಕೆ ಲಗ್ಗೆ ಇಡುತ್ತವೆ. ರಮ್ಮಿ ಕ್ಲಬ್‌ಗಳ ಸೋಗಿನಲ್ಲಿ ಓಸಿ, ಇಸ್ಪೀಟ್‌ ಜೂಜಾಟಗಳು ಗೆಜ್ಜೆ ಕಟ್ಟಿ ಕುಣಿಯುತ್ತಿವೆ. ಜೂಜಿನ ಕ್ಲಬ್‌ಗಳು ರಾಜಾರೋಷವಾಗಿ ನಡೆಯುತ್ತಿವೆ ಎಂಬುದು ಸಾರ್ವಜನಿಕರ ಆರೋಪ.

₹1ಕ್ಕೆ ₹80ರ ಆಮಿಷ!

ಮಟ್ಕಾದಲ್ಲಿ 1 ರೂಪಾಯಿಗೆ 80 ರೂಪಾಯಿ ದುಡಿಯುವ ಆಸೆಗೆ ಬಿದ್ದು, ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇದಕ್ಕೆಂದೇ ಕೊಡಿಯಾಲದ ತುಂಗಭದ್ರಾ ನದಿ ತೀರದಲ್ಲಿ ಗೋಪ್ಯ ಸ್ಥಳಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಕೆಲವರು ಮನೆಗಳನ್ನು ಬಾಡಿಗೆ ಕೊಟ್ಟು ಬುಕ್ಕಿಗಳಿಂದ ವಂತಿಗೆ ಪಡೆಯುತ್ತಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಲು ಜಾಗ ಬದಲಿಸುತ್ತಲೇ ಇರುತ್ತಾರೆ.

ಮೂಲಗಳ ಪ್ರಕಾರ ಪ್ರತಿ ಬುಕ್ಕಿ ಮಟ್ಕಾ ದಂಧೆಯಲ್ಲಿ ಶೇ 20ರಷ್ಟು ಪಾಲು ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ 2-3 ಮಂದಿ ಬುಕ್ಕಿಗಳು ದಂಧೆ ಮುನ್ನಡೆಸುತ್ತಾರೆ. ʼಮುಂಬೈ ಮಾರ್ನಿಂಗ್‌ʼ, ʼಕಲ್ಯಾಣ್ ಡೇʼ, ʼಕಲ್ಯಾಣ್‌ ನೈಟ್‌ʼ,‌ ʼಕಲ್ಯಾಣ್‌ ಮಟ್ಕಾʼ, ʼಕಲ್ಯಾಣ್‌ ಬಜಾರ್‌ʼ, ʼಮಿಲನ್‌ ನೈಟ್‌ʼ, ʼಸಟ್ಟಾ ಮಟ್ಕಾʼ... ಹೀಗೆ ವಿವಿಧ ಹೆಸರುಗಳಲ್ಲಿ ಅವ್ಯವಹಾರ ನಡೆಯುತ್ತದೆ. ದಿನಕ್ಕೆ ಎರಡು ಬಾರಿ ಹೊರ ಬೀಳುವ ಓಪನ್‌, ಕ್ಲೋಸ್‌ಗಾಗಿ ಜೂಜುಕೋರರು ಕೈಯಲ್ಲಿ ಬೀಡಿ, ಸಿಗರೇಟ್‌, ಮೊಬೈಲ್‌ ಹಿಡಿದು ಚಡಪಡಿಸುತ್ತಾರೆ ಎಂದು ಸ್ಥಳೀಯರು ವಿವರಿಸುತ್ತಾರೆ.

**

ಅಕ್ರಮ ದಂಧೆಯ ಮೂಲ ಬೇರುಗಳನ್ನು ಕತ್ತರಿಸಬೇಕು. ದಂಧೆಕೋರರ ಮೇಲೆ ಪ್ರಕರಣ ದಾಖಲಿಸುವ ಜತೆಗೆ ಕಠಿಣ ಕ್ರಮ ಜರುಗಿಸಬೇಕು
- ಈರಣ್ಣ ಹಲಗೇರಿ, ರೈತ ಮುಖಂಡ

**

ಮಟ್ಕಾ, ಇಸ್ಪೀಟ್‌ ಗೀಳು ಹಚ್ಚಿಕೊಂಡು ಸಾಕಷ್ಟು ಜನ ಮನೆ, ಆಸ್ತಿ ಕಳೆದುಕೊಂಡಿದ್ದಾರೆ. ಪೊಲೀಸರು ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟಿ, ದಂಧೆಗೆ ಕಡಿವಾಣ ಹಾಕಬೇಕು
– ಬಸವರಾಜ ಜಕ್ಕಿನಕಟ್ಟಿ,ಸಾಮಾಜಿಕ ಕಾರ್ಯಕರ್ತ

**

ಸವಣೂರು ತಾಲ್ಲೂಕಿನಲ್ಲಿ ಕಳೆದ 10 ತಿಂಗಳಿನಲ್ಲಿ 28 ಮಟ್ಕಾ ಅಡ್ಡೆ ಹಾಗೂ 15 ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ 110 ಆರೋಪಿಗಳನ್ನು ಬಂಧಿಸಲಾಗಿದೆ
– ದೇವಾನಂದ ಎಸ್, ಸಿಪಿಐ, ಸವಣೂರು

**

ಓಸಿ ಮಟ್ಕಾ ಬಂದ್‌ ಮಾಡಿಸಲು ಎಸ್ಪಿಗೆ ಅವರಿಗೆ ಮನವಿ ಸಲ್ಲಿಸಿದ್ದೇವೆ. ಕೆಲವು ಚುನಾಯಿತ ಪ್ರತಿನಿಧಿಗಳು ಓಸಿ ದಂಧೆ ಹಣದಲ್ಲಿ ಮಜಾ ಉಡಾಯಿಸುತ್ತಿದ್ದಾರೆ
– ರವೀಂದ್ರಗೌಡ ಪಾಟೀಲ, ರೈತ ಮುಖಂಡ

**

ಮಟ್ಕಾ ಬಗ್ಗೆ ನಿರಂತರ ದಾಳಿ ನಡೆಸುತ್ತಿದ್ದೇವೆ. ಸಾರ್ವಜನಿಕರು ಮಾಹಿತಿ ನೀಡಿದರೆ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ
– ಹನುಮಂತರಾಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹಾವೇರಿ

**

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ, ಶಂಕರ ಕೊಪ್ಪದ, ಎಸ್‌.ಎಸ್‌.ನಾಯಕ, ದುರುಗಪ್ಪ ಕೆಂಗನಿಂಗಪ್ಪನವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.