ADVERTISEMENT

ಜನಪರ ಕಾರ್ಯಗಳಿಗೆ ಸದಾಮುಂದೆ: ಯು.ಬಿ. ಬಣಕಾರ

ಮದಗ ಮಾಸೂರು ಕೆರೆಗೆ ಶಾಸಕರಿಂದ ಬಾಗೀನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 14:30 IST
Last Updated 10 ಸೆಪ್ಟೆಂಬರ್ 2024, 14:30 IST
ರಟ್ಟೀಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಗೆ ಶಾಸಕ ಯು.ಬಿ. ಬಣಕಾರ ಮಂಗಳವಾರ ಸಹಸ್ರಾರು ಬೆಂಬಲಿರೊಂದಿಗೆ ಈಚೆಗೆ ಬಾಗೀನ ಅರ್ಪಣೆ ಮಾಡಿದರು
ರಟ್ಟೀಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಗೆ ಶಾಸಕ ಯು.ಬಿ. ಬಣಕಾರ ಮಂಗಳವಾರ ಸಹಸ್ರಾರು ಬೆಂಬಲಿರೊಂದಿಗೆ ಈಚೆಗೆ ಬಾಗೀನ ಅರ್ಪಣೆ ಮಾಡಿದರು   

ರಟ್ಟೀಹಳ್ಳಿ: ರಾಜಕೀಯದಲ್ಲಿ ಅಧಿಕಾರ ಶಾಶ್ವತವಾದುದಲ್ಲ. ಜನರ ಆಶೀರ್ವಾದದಿಂದ ದೊರೆತ ಅಧಿಕಾರಾವಧಿಯಲ್ಲಿ ಸದಾ ಕ್ಷೇತ್ರದ ಜನತೆ ಮಧ್ಯೆಯಿದ್ದು, ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ನಿಜವಾದ ರಾಜಕೀಯ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲ್ಲೂಕಿನ ಮದಗ ಮಾಸೂರು ಕೆರೆಗೆ ಕುಟುಂಬಸಮೇತರಾಗಿ ಸಹಸ್ರಾರು ಬೆಂಬಲಿಗರೊಂದಿಗೆ ಆಗಮಿಸಿ ಮದಗದ ಕೆಂಚಮ್ಮಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಗಂಗಾಮಾತೆಗೆ ಪೂಜೆ ಮಾಡಿ ಈಚೆಗೆ ಬಾಗೀನ ಅರ್ಪಣೆ ಮಾಡಿ ನಂತರ ಮಾತನಾಡಿದರು.

ತಾಲ್ಲೂಕಿನ ತುಂಗಾ ಮೇಲ್ದಂಡೆ ಮುಖ್ಯಕಾಲುವೆ ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ ₹39 ಕೋಟಿ ಮಂಜೂರಾಗಿದ್ದು, ಮುಖ್ಯಕಾಲುವೆಯ ದುರಸ್ತಿ ಕಾರ್ಯಪ್ರಾರಂಭಗೊಳ್ಳಲಿದೆ. ಮದಗ ಮಾಸೂರಿನ ಎಡದಂಡೆ ಹಾಗೂ ಬಲದಂಡೆ ಕಾಲುವೆ ಆಧುನೀಕರಣಕ್ಕೆ ಕರ್ನಾಟಕ ನೀರಾವರಿ ಇಲಾಖೆಯಿಂದ ₹59 ಕೋಟಿ ಮಂಜೂರಾತಿಗೆ ವರದಿ ಸಿದ್ದವಾಗಿದ್ದು, ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಅನುಮೋದನೆಗೊಂಡ ನಂತರ ಅನುದಾನ ಮಂಜೂರಾಗಲಿದೆ ಎಂದರು.

ADVERTISEMENT

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಮದಗದ ಕೆರೆ ಒತ್ತುವರಿ ತಪ್ಪಿಸಿ, ಅಕ್ರಮ ಸಾಗುವಳಿ ನಿಲ್ಲಿಸಬೇಕು. ಕೆರೆಯ ಅಂಗಳದಲ್ಲಿ ಸಾಕಷ್ಟು ನೀರು ನಿಲ್ಲುವಂತೆ ರೈತರು ನೋಡಿಕೊಳ್ಳಬೇಕು. ಮದಗ ಮಾಸೂರಿನ ನಮ್ಮ ಹಕ್ಕಿನ 2.7 ಟಿ.ಎಂ.ಸಿ. ನೀರಿಗಾಗಿ ರೈತರೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆಕೊಟ್ಟರು.

ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳಮಠದ ಮಹಾಂತ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಪಿ.ಡಿ. ಬಸನಗೌಡ್ರ, ನಾರಾಯಣಪ್ಪ ಗೌರಕ್ಕನವರ, ಮಾಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮೀಳಾ ನಡುವಿನಮನಿ, ಅನ್ನಪೂರ್ಣ ಬಣಕಾರ, ರವೀಂದ್ರ ಮುದಿಯಪ್ಪನವರ, ಎ.ಕೆ. ಪಾಟೀಲ, ಪ್ರಕಾಶ ಬನ್ನಿಕೋಡ, ನಿಂಗಪ್ಪ ಚಳಗೇರಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.