ಹಾನಗಲ್: ‘ಮುಸ್ಲಿಮರು ಕೇವಲ ವೋಟ್ ಬ್ಯಾಂಕ್ ಅಲ್ಲ. ಅವರೂ ನಮ್ಮಂತೆ ಮನುಷ್ಯರು ಎಂಬುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕು. 70 ವರ್ಷಗಳಿಂದ ಅಲ್ಪಸಂಖ್ಯಾತರನ್ನು ‘ವೋಟ್ ಬ್ಯಾಂಕ್’ ಮಾಡಿಕೊಂಡ ಕಾಂಗ್ರೆಸ್ ನಡವಳಿಕೆ ಬದಲಾಗಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಪರ ಪ್ರಚಾರ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈ ಚುನಾವಣೆ ಮೂಲಕ ಸರ್ಕಾರ ದಾರಿ ತಪ್ಪುತ್ತಿರುವ ಬಗ್ಗೆ ಮತದಾರರು ಸಂದೇಶ ನೀಡಬಹುದು. ಈ ಬೈ ಎಲೆಕ್ಷನ್ ನನ್ನ ಗುರಿ ಅಲ್ಲ. ಈ ಚುನಾವಣೆ ಫಲಿತಾಂಶದ ಮೇಲೆ 2023ಕ್ಕೆ ‘ಮಿಷನ್ 123’ಗೆ ಪ್ರೋತ್ಸಾಹ ಸಿಗಬಹುದು. ಈ ಬೈ ಎಲೆಕ್ಷನ್ ನಮ್ಮ ‘ಮಿಷನ್ ಟೆಸ್ಟಿಂಗ್’ ಚುನಾವಣೆ ಎಂದರು.
ಹಣದ ಚೀಲದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಬಗ್ಗೆ ಅನುಭವವಿದೆ. ಅಧಿಕಾರ ನಡೆಸಬೇಕಾದರೆ ಹಣದ ಚೀಲ ಹೇಗೆ ತರಬೇಕು ಎಂಬುದು ಅವರಿಗೆ ಗೊತ್ತಿದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಇಲ್ಲಿ ಯಾರೂ ಸತ್ಯಹರಿಶ್ಚಂದ್ರ ಇಲ್ಲ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.