
ಗುತ್ತಲ: ಗೋವಿನಜೋಳಕ್ಕೆ ಬೆಲೆ ಕುಸಿತ ಮತ್ತು ಬೆಳೆಗಳಿಗೆ ಲದ್ದಿಹುಳದ ಬಾಧೆಯಿಂದ ಗೋವಿನಜೋಳ ಬೆಳೆಯುತ್ತಿರುವ ರೈತರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಲ್ಲಾಳಿಗಳ ಮತ್ತು ಸರ್ಕಾರದ ಚೆಲ್ಲಾಟದಲ್ಲಿ ಬೆಲೆಕುಸಿತದಿಂದ ಪಾರಾಗಲು ರೈತ ಹರಸಾಹಸ ಪಡುತ್ತಿದ್ದಾನೆ.
ಎರಡರಿಂದ ಮೂರು ಬಾರಿ ಔಷಧಿ ಸಿಂಪಡಿಸಿದರೂ ಲದ್ದಿಹುಳು ಹತೋಟಿಗೆ ಬರುತ್ತಿಲ್ಲ. ಮೋಡ ಕವಿದ ವಾತಾವರಣವಿದ್ದರೆ ಭಾರಿ ಪ್ರಮಾಣದಲ್ಲಿ ಲದ್ದಿಹುಳು ಉತ್ಪತ್ತಿಯಾಗುತ್ತಿದೆ, ಬೆಳೆ ಸಂಪೂರ್ಣ ನಾಶವಾಗುತ್ತಿದೆ ಎಂದು ರೈತ ಮಂಜುನಾಥ ಕದಂ ಹೆಳುತ್ತಾರೆ.
ಹಿಂದಿನ ವರ್ಷ ತರಕಾರಿ ಬೆಳೆಗಳನ್ನು ಬೆಳೆದು ಬೆಲೆ ಕುಸಿತದಿಂದ ಕೈ ಸುಟ್ಟುಕೊಂಡಿರುವ ರೈತರು ಈ ಬಾರಿ ಹಿಂಗಾರಿನಲ್ಲಿ ಗೋವಿನಜೋಳ ಬೆಳೆಯುತ್ತಿದ್ದಾರೆ. ಆದರೆ ಲದ್ದಿಹುಳ ಬಾಧೆಯಿಂದ ಬೆಳೆ ಕೈ ಸಿಗುತ್ತಿಲ್ಲ ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.
‘ಹಿಂದಿನ ವರ್ಷ 3 ಎಕರೆ ಈರುಳ್ಳಿ ಹಾಕಿ ಉತ್ತಮ ಬೆಳೆ ಬೆಳೆದಿದ್ದೇನೆ. ಆದರೆ ಬೆಲೆ ಕುಸಿತದಿಂದ ಬೆಳೆಗೆ ಮಾಡಿದ ಖರ್ಚುವೆಚ್ಚಕ್ಕೆ ಸಮವಾಯಿತು ಈ ಬಾರಿ ಈರುಳ್ಳಿ ಬೆಲೆ ಕುಸಿತವಿರುವದರಿಂದ ಗೋವಿನ ಜೋಳವನ್ನು ಹಾಕಿದ್ದೇನೆ. ಆದರೆ ಲದ್ದಿ ಹುಳಕ್ಕೆ ಬೆಳೆ ನಾಶವಾಗುತ್ತಿದೆ’ ಎಂದು ಪಟ್ಟಣದ ರೈತ ಸಿದ್ದಪ್ಪ ಚಿಂದಿ ಹೇಳುತ್ತಾರೆ.
ಈಚಿನ ದಿನಗಳಲ್ಲಿ ಗೋವಿನಜೋಳದ ಬೆಳೆಗೆ ಖರ್ಚು ಹೆಚ್ಚಾಗುತ್ತಿದೆ. ಆದರೆ ಬೆಲೆ ಕುಸಿತದಿಂದ ರೈತರಿಗೆ ಲಾಭಾಂಶವು ಕಡಿಮೆ ಬರುತ್ತಿದೆ ಎಂದು ರೈತರು ಹೇಳುತ್ತಾರೆ.
–––
ಲದ್ದಿ ಹುಳಕ್ಕೆ ಇಮಾಮಿಥೇನ್ ಬೆಂಜೊಯಟ್ ಸಿಂಪರಣೆ ಮಾಡುವದರಿಂದ ಸಂಪೂರ್ಣ ವಾಸಿಯಾಗುತ್ತದೆ.
–ವಿರಭದ್ರಪ್ಪ.ಬಿ.ಎಚ್.ಸಹಾಯಕ ಕೃಷಿ ನಿರ್ದೇಶಕರು ಹಾವೇರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.