ADVERTISEMENT

ರಾಷ್ಟ್ರೀಯ ಯುವ ದಿನಾಚರಣೆ: ಶಿಕ್ಷಣದ ಜೊತೆಗೆ ಸಂಸ್ಕಾರವಿರಲಿ

ಡಾ.ಪಿ.ಆರ್‌.ಹಾವನೂರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 14:28 IST
Last Updated 12 ಜನವರಿ 2021, 14:28 IST
ಹಾವೇರಿಯ ಕೆಎಲ್ಇ ಸೊಸೈಟಿ ಸಿ.ಬಿ. ಪಾಲಿಟೆಕ್ನಿಕ್‍ನಲ್ಲಿ ಮಂಗಳವಾರ ನಡೆದ ರಕ್ತದಾನ ಶಿಬಿರ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು
ಹಾವೇರಿಯ ಕೆಎಲ್ಇ ಸೊಸೈಟಿ ಸಿ.ಬಿ. ಪಾಲಿಟೆಕ್ನಿಕ್‍ನಲ್ಲಿ ಮಂಗಳವಾರ ನಡೆದ ರಕ್ತದಾನ ಶಿಬಿರ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು   

ಹಾವೇರಿ: ‘ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ, ನಮ್ಮ ಇತಿಹಾಸ ಚರಿತ್ರೆಗಳನ್ನು ನಾವು ಓದಬೇಕು ಹಾಗೂ ಶಿಕ್ಷಣದ ಜೊತೆಗೆ ಸಂಸ್ಕಾರವಿರಲಿ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರು ಹೇಳಿದರು.

ನಗರದ ಕೆಎಲ್ಇ ಸೊಸೈಟಿ ಸಿ.ಬಿ. ಪಾಲಿಟೆಕ್ನಿಕ್‍ನಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರಬಂಧಕ ಮತ್ತು ನಿಯಂತ್ರಣ ಘಟಕ ಮತ್ತು ರೆಡ್ ಕ್ರಾಸ್ ಸೊಸೈಟಿ, ಹಾಗೂ ಎಲ್ಲಾ ಕಾಲೇಜುಗಳ ರೆಡ್ ರಿಬ್ಬನ್ ಕ್ಲಬ್‍ಗಳು ಸಹಯೋಗದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜ ನಮಗೇನು ನೀಡಿದೆ ಎನ್ನುವ ಬದಲು ಸಮಾಜಕ್ಕೆ ನಾವೇನು ಕೊಡುಗೆ ನೀಡಬಹುದು ಎಂದು ಯೋಚಿಸಬೇಕು. ಯುವ ಸಮೂಹ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ADVERTISEMENT

ಕೆಎಲ್‍ಇ ಸೊಸೈಟಿ ಸಿ.ಬಿ. ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಗೀತಾ ಕೌಜಲಗಿ ಮಾತನಾಡಿ, ‘ಜೀವನದಲ್ಲಿ ಏನೇ ತೊಂದರೆ ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಯುವಕರು ಬೆಳೆಸಿಕೊಳ್ಳಬೇಕು. ಭಾರತದ ಅಖಂಡತೆಯನ್ನು ಮೇಲೆತ್ತಿ, ಯುವಜನರಿಗೆ ಸ್ಫೂರ್ತಿದಾಯಕ ಜಾಗೃತಿಯ ಸಂದೇಶವನ್ನು ನೀಡುತ್ತಾ ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಯುವಜನತೆಗೆ ಮಾದರಿಯಾಗಿದೆ’ ಎಂದು ಹೇಳಿದರು.

ಕೋವಿಡ್ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದ ಹಾಗೂ ರಕ್ತದಾನ ಮಾಡಿದ್ದ ಎಂ.ಡಿ. ಚಿಕ್ಕಣ್ಣನವರು, ಕರಿಬಸಪ್ಪ ಗೊಂದಿ, ತಾನಾಜಿ ಘೋರ್ಪಡೆ, ಪ್ರದೀಪ್ ಮಲ್ಲೂರು, ಸಂತೋಷ್‌ ರೇವಣ್ಣನವರ, ಲೋಹಿತ್ ಗುಂಗೇರ್ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ಜಿಲ್ಲಾ ಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಮ್.ಎನ್ ಹಾಗೂ ಕಾಲೇಜಿನ ಶಿಕ್ಷಕವರ್ಗ ಹಾಗೂ ಸಿಬ್ಬಂದಿ ವರ್ಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.