ADVERTISEMENT

ವಿದ್ಯುತ್ ವಲಯ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 15:22 IST
Last Updated 5 ಅಕ್ಟೋಬರ್ 2020, 15:22 IST
ವಿದ್ಯುತ್‌ ವಲಯ ಖಾಸಗೀಕರಣ ವಿರೋಧಿಸಿ ಹಾವೇರಿಯ ಹೆಸ್ಕಾಂ ವಿಭಾಗ ಕಚೇರಿ ಆವರಣದಲ್ಲಿ ನೌಕರರು ಪ್ರತಿಭಟನೆ ನಡೆಸಿದರು
ವಿದ್ಯುತ್‌ ವಲಯ ಖಾಸಗೀಕರಣ ವಿರೋಧಿಸಿ ಹಾವೇರಿಯ ಹೆಸ್ಕಾಂ ವಿಭಾಗ ಕಚೇರಿ ಆವರಣದಲ್ಲಿ ನೌಕರರು ಪ್ರತಿಭಟನೆ ನಡೆಸಿದರು   

ಹಾವೇರಿ: ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿತರಣಾ ಕಂಪನಿಗಳ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾವ ವಿರೋಧಿಸಿ ಇಲ್ಲಿಯ ಹೆಸ್ಕಾಂ ವಿಭಾಗ ಕಚೇರಿಯ ಆವರಣದಲ್ಲಿ ನೌಕರರು ಪ್ರತಿಭಟನೆ ನಡೆಸಿದರು.

ಕ.ವಿ.ಪ್ರ.ನಿ ನೌಕರರ ಸಂಘ (659), ಎಂಜಿನಿಯರ್ಸ್‌ ಅಸೋಸಿಯೇಷನ್, ಲೆಕ್ಕಾಧಿಕಾರಿಗಳ ಸಂಘ, ಡಿಪ್ಲೊಮಾ ಎಂಜಿನಿಯರ್ಸ್‌, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಸಂಸ್ಥೆ ಹಾಗೂ ನಿವೃತ್ತ ಸಂಘಗಳ ಒಕ್ಕೂಟ ಕಪ್ಪು ಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದವು.

ಹುಬ್ಬಳ್ಳಿ ಕಂಪನಿ ಉಪಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಪ್ರಸ್ತಾಪಿತ 2003ರ ತಿದ್ದುಪಡಿಯು ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಮೂಲಕ ಖಾಸಗೀಕರಣ ಮಾಡುತ್ತಿರುವುದು ಕಾರ್ಮಿಕ ವಿರೋಧ ನೀತಿ ಆಗಿದ್ದು, ನೌಕರರು, ರೈತರು ಹಾಗೂ ಗ್ರಾಹಕರಿಗೂ ಹೊರೆಯಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಾಯ್ದೆ ತಿದ್ದುಪಡಿ ಮಾಡಿದರೆ ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಖಾಸಗಿ ಕಂಪನಿಗಳ ಕೈ ಬಲವಾಗಲಿದೆ. ಇದರಿಂದ ವಿದ್ಯುತ್ ಮಾರಾಟ, ಖರೀದಿ, ಪ್ರಸರಣ, ಸಬ್ ಲೈಸೆನ್ಸಿಂಗ್ ಹಾಗೂ ಪ್ರಾಂಚೈಸಿ ವ್ಯವಸ್ಥೆ ಸಂಪೂರ್ಣವಾಗಿ ಖಾಸಗಿಯವರ ಪಾಲಾಗುತ್ತದೆ. ನೌಕರರ ಮತ್ತು ಅಧಿಕಾರಿಗಳ ಸಿಗುವ ಸೌಲಭ್ಯಗಳು ದಮನವಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಭಾಗಾಧಿಕಾರಿ ಎಸ್, ಈರಣ್ಣ,ಉಪವಿಭಾಗಾಧಿಕಾರಿಗಳಾದ ಸಿ.ಬಿ. ಹೊಸಮನಿ, ಜಾಗೃತದಳದ ಸಹಾಯಕ ಎಂಜಿನಿಯರ್‌ ನಾಗರಾಜ, ಸ್ಥಳೀಯ ಸಮಿತಿಯ ಅಧ್ಯಕ್ಷ ಎಂ.ಎಸ್‌. ಕುಮ್ಮೂರ, ಕೇಂದ್ರ ಸಮಿತಿ ಸದಸ್ಯ ಎ.ಎಚ್. ಸಾಳುಂಕೆ, ಮಾಜಿ ಸಂಘಟನಾ ಕಾರ್ಯದರ್ಶಿ ಸಿ.ಎ ಕೂಡಲಮಠ, ಸಿ.ಎನ್. ಬಡ್ನಿ, ನಿವೃತ್ತ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್.ಟಿ ಹಾವೇರಿ ಮಾತನಾಡಿದರು.

ಸತೀಶ ಕುಲಕರ್ಣಿ, ಕೆ ಎನ್ ಜಾನ್ವೇಕರ, ಬಡ್ನಿ ಮುಂತಾದವರು ಕಾರ್ಮಿಕ ಕ್ರಾಂತಿ ಗೀತೆಯನ್ನು ಹಾಡಿದರು.
ಆರಂಭದಲ್ಲಿ ಕಾರ್ಯದರ್ಶಿಗಳಾದ ಎ ಕೆ ಯಮನೂರ, ಸ್ವಾಗತಿಸಿದರು, ಕೊನೆಯಲ್ಲಿ ಕೆ.ಎನ್.ಅಗಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.