ಹಲ್ಲೆ
– ಗೆಟ್ಟಿ ಚಿತ್ರ
ಶಿಗ್ಗಾವಿ: ಇಲ್ಲಿಯ ಬಟ್ಟೆ ಅಂಗಡಿಯೊಂದರಲ್ಲಿ ಗಂಗಪ್ಪ ಹೂವಣ್ಣನವರ (32) ಎಂಬುವವರ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ತೀವ್ರ ಗಾಯಗೊಂಡಿರುವ ಗಂಗಪ್ಪ ಅವರು ಶಿಗ್ಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಗಂಗಪ್ಪ ಅವರ ಮೇಲೆ ಬುಧವಾರ ತೀವ್ರತರ ಹಲ್ಲೆ ನಡೆದಿದೆ. ಅವರು ನೀಡಿರುವ ದೂರು ಆಧರಿಸಿ ಆರೋಪಿ ಮಹ್ಮದ್ ಸಲೀಂ ಶೇಕ್ (27) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಂಗಪ್ಪ ಹಾಗೂ ಮಹ್ಮದ್, ಹಲವು ವರ್ಷಗಳ ಸ್ನೇಹಿತರು. ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಗಂಗಪ್ಪ ಅವರು ಮಹ್ಮದ್ಗೆ ₹ 2 ಲಕ್ಷ ಸಾಲ ನೀಡಿದ್ದರು. ಸಾಲ ವಾಪಸು ಕೊಟ್ಟಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಹಲವು ಬಾರಿ ಮನಸ್ತಾಪ ಉಂಟಾಗಿತ್ತು.’
‘ಬುಧವಾರ ಗಂಗಪ್ಪ ಅವರಿಗೆ ಕರೆ ಮಾಡಿದ್ದ ಆರೋಪಿ ಮಹ್ಮದ್, ತನ್ನ ಅಂಗಡಿಗೆ ಕರೆಸಿಕೊಂಡು ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿದ್ದಾನೆ’ ಎಂದರು.
ಕೊಲೆಗೆ ಯತ್ನ: ‘ಹಣ ನೀಡುವುದಾಗಿ ಹೇಳಿ ಅಂಗಡಿಗೆ ಕೆರೆಸಿಕೊಂಡಿದ್ದ ಮಹ್ಮದ್, ನನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ’ ಎಂದು ಗಂಗಪ್ಪ ಅವರು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಹ್ಮದ ಸಲೀಂ ಶೇಕ್ ನನ್ನ ಬಳಿ ₹ 2 ಲಕ್ಷ ಸಾಲ ಪಡೆದಿದ್ದ. ಎರಡು ತಿಂಗಳಿಂದ ಸಾಲ ವಾಪಸು ಕೊಟ್ಟಿರಲಿಲ್ಲ. ನಾಳೆ ಕೊಡುತ್ತೇನೆ ಎನ್ನುತ್ತಲೇ ದಿನದೂಡುತ್ತಿದ್ದ. ನನ್ನ ಹಣ ವಾಪಸು ಕೊಡುವಂತೆ ಕೇಳಿದ್ದೆ’ ಎಂದರು.
‘ಅಂಗಡಿಗೆ ಬಂದು ಹಣ ತೆಗೆದುಕೊಂಡು ಹೋಗು ಎಂದು ಆತ ಹೇಳಿದ್ದ. ಅದನ್ನು ನಂಬಿ ಅಂಗಡಿಗೆ ಹೋಗಿದ್ದೆ. ಒಳಗೆ ಹೋಗುತ್ತಿದ್ದಂತೆ ಶಟರ್ ಎಳೆದಿದ್ದ ಆರೋಪಿ, ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹೊಡೆದಿದ್ದಾನೆ’ ಎಂದು ಹೇಳಿದರು.
ಸಂಧಾನಕ್ಕೆ ಯತ್ನ: ‘ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಕೃತ್ಯದಿಂದ ಪಾರು ಮಾಡಲು ಕೆಲ ರಾಜಕೀಯ ಮುಖಂಡರು ಮುಂದಾಗಿದ್ದರು. ಆರಂಭದಲ್ಲಿ ದೂರು ಪಡೆಯಲು ಪೊಲೀಸರು ಸಹ ಹಿಂದೇಟು ಹಾಕಿದ್ದರು. ಸಂಧಾನ ನಡೆಸಲು ಯತ್ನಿಸಿದ್ದರು’ ಎಂದು ಗಾಯಾಳು ಸಂಬಂಧಿಕರು ದೂರಿದ್ದಾರೆ.
‘ಅಪರಾಧಿಕ ಸಂಚು ಹಾಗೂ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಆರೋಪಿಯನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.