ADVERTISEMENT

ಜನರ ಪ್ರೀತಿ, ವಿಶ್ವಾಸದ ಮುಂದೆ ಅಧಿಕಾರ ದೊಡ್ಡದಲ್ಲ: ಸಿಎಂ ಬೊಮ್ಮಾಯಿ ಭಾವುಕ ನುಡಿ

ಬದುಕು ಶಾಶ್ವತವಲ್ಲ, ಸ್ಥಾನಮಾನ ಕೂಡ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 13:07 IST
Last Updated 19 ಡಿಸೆಂಬರ್ 2021, 13:07 IST
ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ನಡೆದ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ ಹಾಗೂ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜದ ವತಿಯಿಂದ ಖಡ್ಗ ನೀಡಿ ಸನ್ಮಾನಿಸಲಾಯಿತು. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಇದ್ದಾರೆ  
ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ನಡೆದ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣ ಹಾಗೂ ಪಂಚಮಸಾಲಿ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜದ ವತಿಯಿಂದ ಖಡ್ಗ ನೀಡಿ ಸನ್ಮಾನಿಸಲಾಯಿತು. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಇದ್ದಾರೆ     

ಹಾವೇರಿ: ‘ಈ ಬದುಕೇ ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೋ ಅದು ಗೊತ್ತಿಲ್ಲ. ಅದರಂತೆ ಸ್ಥಾನಮಾನ ಕೂಡ ಶಾಶ್ವತವಲ್ಲ.ಕ್ಷೇತ್ರದ ಹೊರಗಡೆ ಮಾತ್ರ ನಾನು ಸಿಎಂ. ಶಿಗ್ಗಾವಿ–ಸವಣೂರ ಕ್ಷೇತ್ರದ ಒಳಗಡೆ ಬಂದಾಗ ನಾನು ಕೇವಲ ಬಸವರಾಜ ಬೊಮ್ಮಾಯಿಯಾಗಿ ಉಳಿಯುತ್ತೇನೆ. ಹೆಸರಿನ ಹಿಂದೆ ಇರುವ ಪದನಾಮಗಳು ಶಾಶ್ವತವಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ನುಡಿದರು.

ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ವೀರರಾಣಿ ಕಿತ್ತೂರು ಚನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಮತ್ತು ಪಂಚಮಸಾಲಿ ಸಮುದಾಯ ಭವನದ ಕಾಮಗಾರಿಗೆ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ‌‌ ನಿಂತಿದ್ದೇನೆ.ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ,‌ ನವಣೆ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ಆ ಋಣ ತೀರಿಸಲು ಆಗೋದಿಲ್ಲ ಎಂದು ಬೊಮ್ಮಾಯಿ ಕೆಲಕ್ಷಣ ಗದ್ಗದಿತರಾದರು.

ADVERTISEMENT

‘ನನಗೆ ಬಹಳ ದೊಡ್ಡ ಆಸೆಯಿಲ್ಲ. ನಿಮ್ಮ ಪ್ರೀತಿ, ವಿಶ್ವಾಸದ ಮುಂದೆ ಯಾವ ಅಧಿಕಾರ ಕೂಡ ದೊಡ್ಡದಲ್ಲ. ಭಾವನಾತ್ಮಕವಾಗಿ ಮಾತನಾಡಬಾರದು ಎಂದು ಅನಿಸಿದರೂ ನಿಮ್ಮನ್ನು ನೋಡಿದಾಗಭಾವನೆಗಳು ಉಕ್ಕಿ ಬರುತ್ತಿವೆ. ದೊಡ್ಡ ಜವಾಬ್ದಾರಿ ಹೆಗಲ ಮೇಲೆ ಇದೆ. ಎಲ್ಲ ಸಮುದಾಯಗಳ ಭಾವನಗಳಿಗೆ ಸ್ಪಂದಿಸಬೇಕಿದೆ. ಸರ್ಕಾರಕ್ಕೆ ಹಲವಾರು ಸವಾಲುಗಳಿವೆ. ಅವುಗಳನ್ನು ಎದುರಿಸಿ ಜಯ ಗಳಿಸಬೇಕಿದೆ. ಜನರ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ’ ಎಂದು ನುಡಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಎಂಬ ಹಕ್ಕೊತ್ತಾಯಕ್ಕೆ ಸಂಬಂಧಿಸಿದಂತೆ, ‘ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂಪೂರ್ಣ ಸಹಕಾರ ನೀಡಿ. ಧ್ವನಿ ಇಲ್ಲದವರಿಗೆ, ತುಳಿತಕ್ಕೆ ಒಳಗಾದವರಿಗೆ ಧ್ವನಿ ನೀಡಲು ಬದ್ಧವಾಗಿದ್ದೇವೆ. ಎಲ್ಲ ಸಮುದಾಯಗಳಿಗೂ ಪ್ರಾಶಸ್ತ್ಯ ನೀಡಿ, ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

‘ಬೊಮ್ಮಾಯಿಗೆ ಕೇಂದ್ರ ಸಚಿವರಾಗುವ ಯೋಗ’

ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಮತ್ತು ನನ್ನದು 30 ವರ್ಷಗಳ ಸ್ನೇಹ. ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ. ಅವರ ತಂದೆ ಎಸ್‌.ಆರ್‌. ಬೊಮ್ಮಾಯಿ ಕೇಂದ್ರ ಮಂತ್ರಿಯಾದ ರೀತಿ ಪುತ್ರ ಬೊಮ್ಮಾಯಿ ಕೂಡ ಕೇಂದ್ರ ಮಂತ್ರಿ ಆಗಲಿದ್ದಾರೆ’ ಎಂದರು.

ಈ ಮಾತಿಗೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರು ಕೇಂದ್ರ ಮಂತ್ರಿಯಾಗುವ ಅವಶ್ಯವಿಲ್ಲ. ಅವರು 2023ರ ನಂತರವೂ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿ ಎಂದು ಆಶಿಸಿದರು. ಇದಕ್ಕೆ ತಕ್ಷಣ ಮುರುಗೇಶ ನಿರಾಣಿ, ನನ್ನ ಮಾತನ್ನು ಸ್ವಾಮೀಜಿ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಬೊಮ್ಮಾಯಿ ಈಗ ಕೇಂದ್ರ ಮಂತ್ರಿಯಾಗುತ್ತಾರೆ ಎಂದು ಹೇಳಲಿಲ್ಲ. ಮುಂದೆ ಕೇಂದ್ರ ಮಂತ್ರಿಯಾಗುವ ಯೋಗವಿದೆ ಎಂದು ಹೇಳಿದೆ ಎಂದು ಸಮಜಾಯಿಷಿ ನೀಡಿದರು.

ಕೆಲದಿನಗಳಿಂದ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ಗುಸುಗುಸು ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಸಭೆಯ ಮಾತುಗಳು ಅದಕ್ಕೆ ಪುಷ್ಪಿ ನೀಡುವಂತಿದ್ದವು. ಬೊಮ್ಮಾಯಿ ಆಡಿದ ನೋವಿನ ನುಡಿಗಳು ಕೂಡ ಸಿಎಂ ಬದಲಾವಣೆಯ ಸೂಚನೆ ಇರಬಹುದು ಎಂಬ ಚರ್ಚೆಗಳು ಜನರ ಮಧ್ಯೆ ಕೇಳಿಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.