ADVERTISEMENT

ವೈಜ್ಞಾನಿಕ ಪದ್ಧತಿಯಿಂದ ಉತ್ಪಾದನೆ ದ್ವಿಗುಣ

ತರಬೇತಿ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 13:54 IST
Last Updated 16 ಮಾರ್ಚ್ 2021, 13:54 IST
ದೇವಿಹೊಸೂರ ಗ್ರಾಮದ ಲಿಂಗರಾಜ ಶಿರಸಂಗಿ ಡಿ.ಎ.ಟಿ.ಸಿ.ಯಲ್ಲಿ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಉದ್ಘಾಟಿಸಿದರು 
ದೇವಿಹೊಸೂರ ಗ್ರಾಮದ ಲಿಂಗರಾಜ ಶಿರಸಂಗಿ ಡಿ.ಎ.ಟಿ.ಸಿ.ಯಲ್ಲಿ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಉದ್ಘಾಟಿಸಿದರು    

ಹಾವೇರಿ: ‘ರೈತರು ಉತ್ಪನ್ನ ಹೆಚ್ಚಿಸಲು ವೈಜ್ಞಾನಿಕ ಪದ್ಧತಿ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಉತ್ಪಾದನೆ ಹೆಚ್ಚಿಸಿಕೊಳ್ಳಲು ಹಾಗೂ ರೈತರ ಬೆಳೆಗಳ ನೇರ ಮಾರಾಟ ಅಗತ್ಯವಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಹೇಳಿದರು.

ದೇವಿಹೊಸೂರ ಗ್ರಾಮದ ಲಿಂಗರಾಜ ಶಿರಸಂಗಿ ಡಿ.ಎ.ಟಿ.ಸಿ.ಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಸ್ಕೊಡ್‍ವೆಸ್ ಒಕ್ಕೂಟದ ಪಾಲುದಾರರಾದ ಸೌಹಾರ್ದ ಇಂಟಿಗ್ರೇಟೆಡ್ ಫೈನಾನ್ಸಿಯಲ್ ಸರ್ವಿಸಸ್ ಸಹಯೋಗದಲ್ಲಿ ಮಂಗಳವಾರ ನಡೆದ ಹಾವೇರಿ ಜಿಲ್ಲಾ ರೈತ ಉತ್ಪಾದಕರ ಸಂಸ್ಥೆಗಳ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನಜೋಳ ಹಾಗೂ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಬಿತ್ತನೆ ನಂತರ ಕಳೆನಾಶಕವಾಗಿ ಲಾಡಿಸ್‍ ಅನ್ನು ರಸಗೊಬ್ಬರದೊಂದಿಗೆ ಬೆರೆಸಿ ಭೂಮಿಗೆ ನೀಡಲಾಗುತ್ತಿದೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ ಹಾಗೂ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಲಾಡಿಸ್‍ ಅನ್ನು ಮರಳಿನೊಂದಿಗೆ ಬೆರಸಿ ನೀಡಬಹುದು. ನಮ್ಮ ಪದ್ಧತಿ ಬದಲಾಯಿಸಬೇಕು, ಸಂಪನ್ಮೂಲ ವ್ಯರ್ಥವಾಗುವುದನ್ನು ತಡೆಯಬೇಕು ಎಂದು ಹೇಳಿದರು.

ADVERTISEMENT

ಆದಾಯ ಹೆಚ್ಚಿಸಲು, ಬಾಡಿಗೆ ಸೇವಾ ಆಧಾರಿತ ಪರಿಕರ ಕೇಂದ್ರ ಹಾಗೂ ಬೆಳೆ ವರ್ಧಕಗಳ, ನೇರ ಮಾರುಕಟ್ಟೆ ಬಗ್ಗೆ ಹೋಬಳಿ ಮಟ್ಟದಲ್ಲಿ ರೈತರ ಗುಂಪುಗಳಿಗೆ ತರಬೇತಿ ನೀಡಲಾಗುತ್ತಿದೆ. ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನೇರವಾಗಿ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಲಾಗಿದೆ. ಮುಸುಕಿನ ಜೋಳದಿಂದ ಪಶು ಹಾಗೂ ಕೋಳಿಗೆ ಆಹಾರ ತಯಾರಿಸಲಾಗುತ್ತಿದೆ. ರೈತರು ನೇರವಾಗಿ ತಯಾರಿಕಾ ಕಂಪನಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದರು.

ಜಂಕಫುಡ್ ಸೇವನೆಯಿಂದ 35 ವರ್ಷದೊಳಗಿನ ಯುವ ಜನತೆ ಅನೇಕ ರೋಗಗಳಿಗೆ ಒಳಗಾಗುತ್ತಿದ್ದಾರೆ. 2021-22ನೇ ಸಾಲನ್ನು ‘ಯುನೈಟೆಡ್ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿದ್ದು, ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಿಸಬೇಕು. ಸಿರಿಧಾನ್ಯಗಳು ಪೌಷ್ಟಿಕ ಆಹಾರವಾಗಿದ್ದು, ಇದರ ಬಳಕೆ ಅಗತ್ಯವಾಗಿದೆ. ಚಂದ್ರಕಾಂತ ಸಂಗೂರ ಅವರು ಸಿರಿಧಾನ್ಯಗಳನ್ನು ದೇಶದ ವಿವಿಧ ರಾಜ್ಯಗಳಿಗೆ ಹಾಗೂ ಲಂಡನ್, ಇಂಗ್ಲೆಂಡ್ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ರೈತರು ಮನಸು ಮಾಡಿದರೆ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮನೋಹರ ಮಸ್ಕಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಹಾವೇರಿ ಕೃಷಿ ಉಪನಿರ್ದೇಶಕ ಕರಿಯಲ್ಲಪ್ಪ, ರಾಣೆಬೆನ್ನೂರಿನ ಕೃಷಿ ಉಪನಿರ್ದೇಶಕಿ ಸ್ಫೂರ್ತಿ, ಸಹಾಯಕ ಕೃಷಿ ನಿರ್ದೇಶಕ ವಿಜಯ, ಪೂರ್ಣ ಪ್ರಜ್ಞ ಬೆಳ್ಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.