ರಾಣೆಬೆನ್ನೂರು: ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಶನಿವಾರ ಸ್ವಾಭಿಮಾನಿ ಕರವೇ ಪದಾಧಿಕಾರಿಗಳು ಕಾರ್ಮಿಕ ನಿರೀಕ್ಷಕರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ನಂತರ ಕಾರ್ಮಿಕ ನಿರೀಕ್ಷಕ ದೇವೆಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಜಾಧವ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು 2022 ರಿಂದ 2025ರವರೆಗೆ ಕಾರ್ಮಿಕರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ, ಮದುವೆ ಸಹಾಯ ಧನ ಅರ್ಜಿ, ಲ್ಯಾಪ್ ಟಾಪ್, ಕಾರ್ಮಿಕರ ಕೆಲಸದ ಕಿಟ್, ಕಾರ್ಮಿಕರ ಮಕ್ಕಳ ಸ್ಕೂಲ್, ಹೆರಿಗೆ ಭತ್ಯೆ, ಕಾರ್ಮಿಕರ ವೈದ್ಯಕೀಯ ಸಹಾಯಧನ, ಕಾರ್ಮಿಕರು ಕೆಲಸದಲ್ಲಿ ಮರಣ ಹೊಂದಿದರೆ ಡೆತ್ ಕ್ಲೇಮ್ಗೆ ಅರ್ಜಿ, 60 ವರ್ಷ ಪೂರೈಸಿದ ನಂತರ ಪೆನ್ಷನ್ಗೆ ಬರೀ ಅರ್ಜಿ ಹಾಕುವ ಕೆಲಸ ಅಷ್ಟೇ ಆಗಿದೇ ಹೊರತು ಇದುವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆನ್ಲೈನ್ ಅರ್ಜಿ ಹಾಕಿ ಕಚೇರಿಗೆ ಅಲೆದಾಡುವಂತಾಗಿದೆ ಎಂದು ಆರೋಪಿಸಿದರು.
ಕಾರ್ಮಿಕರ ಘಟಕದ ಜಿಲ್ಲಾ ಅಧ್ಯಕ್ಷ ಪರಶುರಾಮ ಕುರುವತ್ತಿ ಮಾತನಾಡಿ, ಕಾರ್ಮಿಕರ ವಿವಿಧ ಸೌಲಭ್ಯಗಳ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಅವರು ಜಿಲ್ಲೆಯಲ್ಲಿ ಫೇಕ್ ಕಾರ್ಡ್ ಗಳು ಹೆಚ್ಚಾಗಿವೆ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಇದುವರೆಗೂ ಕಾರ್ಮಿಕರ ಖಾತೆಗೆ ಹಣ ಜಮಾ ಆಗಿಲ್ಲ. ಕೂಡಲೇ ಅರ್ಜಿ ಹಾಕಿದ ಫಲಾನುಭವಿಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಪ್ಪ ಬಣಕಾರ, ಮಲ್ಲಿಕಾರ್ಜುನ ಸಾವಕ್ಕಳವರ, ಗೋಪಿ ಕುಂದಾಪುರ, ರಿಯಾಜ್ ದೊಡ್ಡಮನಿ, ಮೃತ್ಯುಂಜಯ ಕರಿಯಜ್ಜಿ, ಶೋಭಾ ಮುದೇನೂರು, ಮರಡೆಪ್ಪ ಚಳಗೇರಿ, ಅಬ್ದುಲ್.ಎನ್.ಕೆ, ಹೊನ್ನಪ್ಪ ಮಾರುತಿ ಮಳಿಯಮ್ಮನವರ, ದಿವಾಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.