ಹಾವೇರಿ: ‘ಲಿಂಗತ್ವ ಅಲ್ಪಸಂಖ್ಯಾತರು ಕಾಯಕದಲ್ಲಿ ಕೈಲಾಸ ಕಂಡವರು. ಮಂಗಳಮುಖಿಯರು ಅಮಂಗಳೆಯರಲ್ಲ, ದೈವೀ ಸ್ವರೂಪಿಯಾದ ಶುಭಮಂಗಳೆಯರು. ಸಮಗ್ರ ಅಭಿವೃದ್ಧಿಗಾಗಿ ‘ಲಿಂಗತ್ವ ಅಲ್ಪಸಂಖ್ಯಾತರ ಪ್ರಾಧಿಕಾರ’ ರಚಿಸಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ವಿಸ್ತಾರ ಸಂಸ್ಥೆ, ಲಶ್ ಸಂಸ್ಥೆ ಹಾಗೂ ಸಂಜೀವಿನಿ ಲೈಂಗಿಕ ಅಥವಾ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ‘ಧರ್ಮ ಮತ್ತು ಲೈಂಗಿಕತೆ’ ಕುರಿತ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎನ್.ಎಂ.ಸಾಲಿ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅವರು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣ ಮತ್ತು ಆರೋಗ್ಯ ಕಾಳಜಿಗೆ ಹೆಚ್ಚಿನ ಒತ್ತು ನೀಡಬೇಕು. ಸ್ವ ಉದ್ಯೋಗಗಳ ತರಬೇತಿ ಪಡೆದು, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು’ ಎಂದು ಹೇಳಿದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಸಹ ತೃತೀಯ ಲಿಂಗಿಗಳಿಗೆ ಸಮಾನತೆ ಕಲ್ಪಿಸಬೇಕು ಎಂದು ಧ್ವನಿ ಎತ್ತಿದ್ದರು. ಕೀಳರಿಮೆ ಬಿಟ್ಟು, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬನ್ನಿ’ ಎಂದು ಸಲಹೆ ನೀಡಿದರು.
ಸಂಜೀವಿನಿ ಲಿಂಗತ್ವ ಅಥವಾ ಲೈಂಗಿಕ ಅಲ್ಪಸಂಖ್ಯಾತರ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷೆ ಅಕ್ಷತಾ ಕೆ.ಸಿ. ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದಿದ್ದಾರೆ. ಸಮಾಜದಲ್ಲಿ ಲಿಂಗ ಅಸಮಾನತೆ ಹೋಗಲಾಡಿಸಬೇಕು. ಮೂಲಸೌಕರ್ಯಗಳನ್ನು ಎಲ್ಲರಿಗೂ ಕಲ್ಪಿಸಬೇಕು’ ಎಂದರು.
ಕರ್ನಾಟಕ ಮುಸ್ಲಿಂ ಜಮಾತ್ ಮಂಗಳೂರ ಸಂಚಾಲಕ ಹಾಜಿ ಮೌಲಾನಾ ಬಿ.ಎ.ಇಬ್ರಾಹಿಂ ಸಖಾಫಿ, ಡಾ.ಎಂ.ಎಚ್.ಹೆಬ್ಬಾಳ, ಮಹಮದ್ ಉಸ್ಮಾನ್, ಮಲ್ಲಪ್ಪ ಕುಂಬಾರ, ಶ್ರೀಕಾಂತ ಕನ್ನಣ್ಣವರ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.