ಹಾವೇರಿ: ‘ಪಂಚಮಸಾಲಿಗಳನ್ನು ‘2ಎ’ಗೆ ಸೇರಿಸಬೇಕು ಎಂಬ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ಒತ್ತಾಯಕ್ಕೆ ರಾಜ್ಯ ಸರ್ಕಾರ ಮಣಿಯಬಾರದು. ನಮ್ಮ ಸವಲತ್ತು ಕಸಿದುಕೊಳ್ಳಲು ಬಂದರೆ, ಆತ್ಮಹತ್ಯೆಗೆ ಮುಂದಾಗಬೇಕಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಎಚ್ಚರಿಕೆ ನೀಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘2ಎ ಪ್ರವರ್ಗದಲ್ಲಿ 107 ಜಾತಿಗಳು ಮತ್ತು ಪ್ರವರ್ಗ–1ರಲ್ಲಿ 95 ಜಾತಿಗಳು ಸೇರಿ 202 ಜಾತಿಗಳ ಒಕ್ಕೂಟವಾಗಿದೆ. ರಾಜ್ಯದಲ್ಲಿ 1.62 ಕೋಟಿ ಮತದಾರರು ಇದ್ದೇವೆ. ಶೇ 15ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಪಡೆಯುತ್ತಿದ್ದೇವೆ. ಪಂಚಮಸಾಲಿಗಳು 2ಎಗೆ ಸೇರ್ಪಡೆಯಾದರೆ, ನಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಕೊಡಲಿಪೆಟ್ಟು ಬೀಳುತ್ತದೆ. ಹೀಗಾಗಿ ನಾವು ‘ಪ್ರತಿ ಚಳವಳಿ’ ಹಮ್ಮಿಕೊಂಡಿದ್ದೇವೆ ಎಂದರು.
ಕುಲಶಾಸ್ತ್ರೀಯ ಅಧ್ಯಯನ ಮತ್ತು ಸಾಮಾಜಿಕ, ಶೈಕ್ಷಣಿಕ ಜಾತಿ ಜನಗಣತಿ ನಡೆಯದೇ ಒಂದು ಜನಾಂಗವನ್ನು 2ಎಗೆ ಸೇರಿಸಬಾರದು. ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ಕೊಟ್ಟಿರುವ ಸರ್ಕಾರ, 197 ಜಾತಿಗಳಿರುವ ಕಾಯಕ ಸಮಾಜದ ಅಭಿವೃದ್ಧಿ ನಿಗಮ ರಚಿಸಿ, ಕನಿಷ್ಠ ₹1000 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.