ADVERTISEMENT

ಮಳೆ ಅವಾಂತರ: ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 15:47 IST
Last Updated 9 ಜನವರಿ 2021, 15:47 IST
ಹಾವೇರಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಮತ್ತು ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ತಂಡ ಮಳೆ ಅವಾಂತರದ ಬಗ್ಗೆ ಪರಿಶೀಲನೆ ನಡೆಸಿತು 
ಹಾವೇರಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಮತ್ತು ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ತಂಡ ಮಳೆ ಅವಾಂತರದ ಬಗ್ಗೆ ಪರಿಶೀಲನೆ ನಡೆಸಿತು    

ಹಾವೇರಿ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಗ್ರಾಮೀಣ ಪ್ರದೇಶದ ವಿವಿಧೆಡೆ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಹಾವೇರಿ ತಾಲ್ಲೂಕಿನ ನಾಗನೂರ, ದೇವಿಹೊಸೂರು ಮುಂತಾದ ಕಡೆ ಜೋಳದ ಬೆಳೆ ನೆಲಕಚ್ಚಿದೆ. ಬಣವೆಗಳಿಗೆ ನೀರು ನುಗ್ಗಿ ರೈತರು ಪರದಾಡಿದ್ದಾರೆ.

ಹಾವೇರಿ ನಗರದ ಶಿವಾಜಿನಗರ, ನಾಗೇಂದ್ರನಮಟ್ಟಿ, ಶಿವಯೋಗೇಶ್ವರ ನಗರ ಮುಂತಾದ ಬಡಾವಣೆಗಳಲ್ಲಿ ತಗ್ಗಿನ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದರು. ಚರಂಡಿಗಳಲ್ಲಿ ಹೂಳು ತುಂಬಿದ್ದ ಕಾರಣ ಕೊಳಚೆ ನೀರು ರಸ್ತೆಯ ತುಂಬ ಹರಿದು ಅವಾಂತರ ಸೃಷ್ಟಿ ಮಾಡಿದೆ. ಕಸದ ರಾಶಿ ಮತ್ತು ಕೊಳಚೆ ನೀರು ಪ್ರವಾಸಿ ಮಂದಿರ, ಪೊಲೀಸ್‌ ಕ್ವಾಟ್ರಸ್‌ ಅಂಗಳಕ್ಕೆ ನುಗ್ಗಿದ ಪರಿಣಾಮ ವಾತಾವರಣ ಕಲುಷಿತಗೊಂಡು ದುರ್ನಾತ ಬೀರುತ್ತಿದೆ.

ADVERTISEMENT

ಶನಿವಾರ ಬೆಳಿಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಪೌರಾಯುಕ್ತ ಪರಶುರಾಮ ಚಲವಾದಿ, ಎಇಇ ಕೃಷ್ಣನಾಯ್ಕ, ಆರೋಗ್ಯ ನಿರೀಕ್ಷಕ ಸೋಮಶೇಖರ ಮಲ್ಲಾಡದ, ಎಸ್‌.ಪಿ.ವಿರಕ್ತಮಠ, ನಗರಸಭೆ ಸದಸ್ಯ ಮಂಜುನಾಥ ಬಿಸ್ಟಣ್ಣನವರ ಮುಂತಾದವರುನಗರದ ಗೂಗಿಕಟ್ಟೆ ಮಳಿಗೆ, ಹೈಟೆಕ್ ಮಾದರಿಯ ರಂಗ ಮಂದಿರ ಹಾಗೂ ಲಾಲ್‌ಬಹದ್ದೂರ್‌ ಶಾಸ್ತ್ರಿ ತರಕಾರಿ ಮಾರುಕಟ್ಟೆ, ಹಾನಗಲ್‌ ರಸ್ತೆ, ಹಳೇ ಪಿ.ಬಿ.ರಸ್ತೆ, ಗುತ್ತಲ ರಸ್ತೆಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದರು.

ತಾಲ್ಲೂಕುವಾರು ಮಳೆ ವಿವರ (ಮಿ.ಮೀಟರ್‌ಗಳಲ್ಲಿ)

ಹಾವೇರಿ ತಾಲ್ಲೂಕು 50.2, ರಾಣೆಬೆನ್ನೂರು–55.2, ಬ್ಯಾಡಗಿ–111, ಹಿರೇಕೆರೂರು–25.4, ಸವಣೂರ–137.5, ಶಿಗ್ಗಾವಿ–28.2 ಹಾಗೂ ಹಾನಗಲ್‌–17.3 ಮಿಲಿ ಮೀಟರ್‌ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.