ADVERTISEMENT

ಕ್ಷಯರೋಗ ತಡೆಗಟ್ಟಲು ಜಾಗೃತಿ ಮೂಡಿಸಿ

2025ರ ವೇಳೆಗೆ ಕ್ಷಯಮುಕ್ತ ಭಾರತದ ಗುರಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 13:58 IST
Last Updated 12 ಅಕ್ಟೋಬರ್ 2021, 13:58 IST
ಕ್ಷಯರೋಗ ಜಾಗೃತಿ ಕಾರ್ಯಕ್ರಮದ ಜಿಲ್ಲಾ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ‘ಕನ್ನಡ ಕೋಗಿಲೆ’ ಕಾರ್ಯಕ್ರಮದ ವಿಜೇತ ಸಮ್ಮಸಗಿಯ ದಾವೂದ್‍ಸಾಬ್ ಕಾಸೀಂ ಅವರನ್ನು ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸನ್ಮಾನಿಸಲಾಯಿತು
ಕ್ಷಯರೋಗ ಜಾಗೃತಿ ಕಾರ್ಯಕ್ರಮದ ಜಿಲ್ಲಾ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ‘ಕನ್ನಡ ಕೋಗಿಲೆ’ ಕಾರ್ಯಕ್ರಮದ ವಿಜೇತ ಸಮ್ಮಸಗಿಯ ದಾವೂದ್‍ಸಾಬ್ ಕಾಸೀಂ ಅವರನ್ನು ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸನ್ಮಾನಿಸಲಾಯಿತು   

ಹಾವೇರಿ: ಕ್ಷಯರೋಗ ನಿಯಂತ್ರಿಸುವ ನಿಟ್ಟಿನಲ್ಲಿ ತಪಾಸಣೆ, ಪರೀಕ್ಷೆ, ಸಕಾಲಿಕ ಚಿಕಿತ್ಸೆ ನಡೆಸಬೇಕು ಹಾಗೂ ಕ್ಷಯರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದುಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕ್ಷಯರೋಗ ನಿಯಂತ್ರಣ ಜಿಲ್ಲಾ ನಾಗರಿಕ ವೇದಿಕೆಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕ್ಷಯರೋಗ ಪತ್ತೆಯಾದ ಆರಂಭದಲ್ಲೇ ಸಕಾಲಿಕವಾಗಿ ಚಿಕಿತ್ಸೆ ಪಡೆದರೆ ಕ್ಷಯರೋಗದ ಹರಡುವಿಕೆ ಅದರ ತೀವ್ರತೆ ತಗ್ಗಿಸಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸೆಗಾಗಿ ಅಗತ್ಯವಿರುವ ಯಂತ್ರಗಳ ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಿ. ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.

ADVERTISEMENT

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಲೇಶ ಅವರು ಮಾಹಿತಿ ನೀಡಿ, 2025ರ ವೇಳೆಗೆ ದೇಶದಲ್ಲಿ ಕ್ಷಯರೋಗ ನಿರ್ಮೂಲನೆಗೆ ಭಾರತದ ಪ್ರಧಾನಿ ಅವರು ಘೋಷಣೆ ಮಾಡಿದ್ದಾರೆ. ಜಗತ್ತಿನಲ್ಲಿ 2030ರ ವೇಳೆಗೆ ಟಿಬಿ ನಿರ್ಮೂಲನೆಗೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಕಳೆದ ಎರಡು ವರ್ಷದಲ್ಲಿ ಕೋವಿಡ್ ಕಾರಣ ಟಿಬಿ ಪತ್ತೆ ಮತ್ತು ಚಿಕಿತ್ಸಾ ಚಟುವಟಿಕೆಗೆ ಹಿನ್ನಡೆಯಾಗಿದೆ. ಆದರೂ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಚಟುವಟಿಕೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಟಿಬಿ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದು ಮಾಹಿತಿ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ನೋಡಲ್ ಅಧಿಕಾರಿ ಡಾ.ಹಂಸವೇಣಿ ಮಾತನಾಡಿ, ಕ್ಷಯರೋಗ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಡೆಡಿಕೆಟೆಡ್ ವಾರ್ಡ್ ಆರಂಭಿಸುವುದು ಅಗತ್ಯವಾಗಿದೆ. ಟಿಬಿ ಪತ್ತೆ ಕಾರ್ಯ, ಜಾಗೃತಿ ಕಾರ್ಯಗಳು ಸಕಾಲದಲ್ಲಿ ಚಿಕಿತ್ಸೆ ನೀಡುವ ಕೆಲಸ ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು.

ಕ್ಷಯರೋಗದಿಂದ ಗುಣಮುಖರಾದ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿಯ ಕೇಶವಮೂರ್ತಿ ದೊಡ್ಮನಿ, ಹಾನಗಲ್ ತಾಲ್ಲೂಕಿನ ಗುಡ್ಡದಚನ್ನಾಪೂರದ ಬಸಪ್ಪ ಜಾಡರ ಅವರು ಸಭೆಯಲ್ಲಿ ಮಾತನಾಡಿ, ತಮ್ಮ ಅನುಭವ ಹಾಗೂ ಚಿಕಿತ್ಸೆಗೆ ದೊರೆತ ಸಕಾಲಿಕ ನೆರವು ಕುರಿತಂತೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ತಾಲ್ಲೂಕು ಆರೋಗ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.