ಬಂಧನ
(ಸಾಂದರ್ಭಿಕ ಚಿತ್ರ)
ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಯೇತರ (ಎನ್ಎ) ಜಮೀನಿನಲ್ಲಿ ಅಭಿವೃದ್ಧಿಪಡಿಸಿದ್ದ ನಿವೇಶನಗಳಿಗೆ ಇ-ಸ್ವತ್ತು ಉತಾರ ಮಾಡಿಕೊಡಲು ಸೋಮವಾರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕೆ.ಮಂಜುನಾಥ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಿರಕಪ್ಪ ಬೂದಿಹಾಳ, ಸದಸ್ಯರಾದ ಸೋಮಶೇಖರ ಕನ್ನಪ್ಪಳವರ, ಪ್ರಸನ್ನ ಬಣಕಾರ ಮತ್ತು ಸೈಯ್ಯದ್ ರೆಹಮಾನ ಕರ್ಜಗಿ ಅಲಿಯಾಸ್ ಭಾಷಾಸಾಬ್ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಣೆಬೆನ್ನೂರಿನ ನವೀನ ಮಲ್ಲೇಶಪ್ಪ ಅಂದನೂರ ಅವರು ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಯೇತರ ಜಮೀನು ಅಭಿವೃದ್ಧಿಪಡಿಸಿದ್ದರು.ಒಟ್ಟು 124 ನಿವೇಶನಗಳ ಪೈಕಿ 60 ನಿವೇಶನಗಳಿಗೆ ಇ–ಸ್ವತ್ತು ಉತಾರ ಮಾಡುವುದಕ್ಕೆ ಪಿಡಿಒ ₹1 ಲಕ್ಷ ಲಂಚ ಪಡೆದಿದ್ದರು. ಇನ್ನುಳಿದ ನಿವೇಶನಗಳಿಗೆ ಉತಾರ ಮಾಡಿಕೊಡಲು ₹4.5 ಲಕ್ಷ ನೀಡುವಂತೆ ಉಪಾಧ್ಯಕ್ಷ ಹಾಗೂ ಸದಸ್ಯರು ಬೇಡಿಕೆ ಇಟ್ಟಿದ್ದರು. ನಂತರ ₹4 ಲಕ್ಷಕ್ಕೆ ಒಪ್ಪಿ ಆರೋಪಿಗಳು ಲಂಚ ಪಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ ಸಿ ಮತ್ತು ತನಿಖಾಧಿಕಾರಿ ಬಸವರಾಜ ಹಳಬಣ್ಣನವರ ಹಾಗೂ ಸಿಬ್ಬಂದಿಯವರಾದ ಸಿ.ಎಂ. ಬಾರ್ಕಿ, ಎಂ.ಕೆ. ನದಾಫ, ಟಿ.ಇ. ತಿರುಮಲೆ, ಬಿ.ಎಂ. ಕರ್ಜಗಿ, ಎಂ.ಕೆ. ಲಕ್ಷ್ಮೇಶ್ವರ, ಆನಂದ ತಳಕಲ್ಲ, ಎಸ್.ಎನ್.ಕಡಕೋಳ, ಎಂ.ಬಿ. ಲಂಗೋಟಿ, ಆರ್.ವೈ. ಗೆಜ್ಜಿಹಳ್ಳಿ, ಶಿವರಾಜ ಲಿಂಗಮ್ಮನವರ, ಎಂ.ಎಸ್.ಕೊಂಬಳಿ, ನಿರಂಜನ ಪಾಟೀಲ, ಬಿ.ಎಸ್.ಸಂಕಣ್ಣನವರ, ಆನಂದ ಶೆಟ್ಟರ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.