ಹಾವೇರಿ: ಉತ್ತರ ಪ್ರದೇಶದ ಹಾಥರಸ್ನಲ್ಲಿಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಮತ್ತು ಕಾನೂನು ಉಲ್ಲಂಘಿಸಿರುವ ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಬೇಕು ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ವತಿಯಿಂದ ಹಾಥರಸ್ ಅತ್ಯಾಚಾರ ಪ್ರಕರಣ ಖಂಡಿಸಿ, ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಯುವತಿಯ ಅಂತಿಮ ಸಂಸ್ಕಾರವನ್ನು ಪೊಲೀಸ್ ಅಧಿಕಾರಿಗಳೇ ಖುದ್ದಾಗಿ ನಿಂತು ಮಾಡಿರುವುದು ಹಾಗೂ ಪೊಲೀಸರೇ ಶವ ಸುಟ್ಟು ಹಾಕಿರುವುದು ಅನುಮಾನ ಮೂಡುವಂತೆ ಮಾಡಿದೆ. ಆರೋಪಿಗಳ ರಕ್ಷಣೆಗಾಗಿ ಸಾಕ್ಷಿ ಇಲ್ಲದಂತೆ ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂಬ ಸಂಶಯ ಮೇಲ್ನೋಟಕ್ಕೆ ಕಂಡು ಬಂದಿದೆ. ದಲಿತ ಮಹಿಳೆಯರಿಗೆ ಸೂಕ್ತ ನ್ಯಾಯ ಮತ್ತು ವಿಶೇಷ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಾಲತೇಶ ಯಲ್ಲಾಪೂರ, ರಮೇಶ ಆನವಟ್ಟಿ, ಬಸವರಾಜ ಹಾದಿಮನಿ, ಎಸ್.ಎಸ್. ಕಳ್ಳಿಮನಿ, ಬಸವಣ್ಣ ಮುಗಳಿ, ಸತೀಶ ಕಾಟೇನಹಳ್ಳಿ, ಮಹಾಂತೇಶ ಹೊಳೆಮ್ಮನವರ, ಮಾರುತಿ ಕಿಳ್ಳಿಕ್ಯಾತರ, ಸಂಜಯಗಾಂಧಿ ಎಸ್.ಸುಭಾಷಪ್ಪ, ಶಂಭು ಕಳಸದ, ಸುರೇಶ ಛಲವಾದಿ, ಫಕ್ಕಿರೇಶ ಕಾಳಿ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.