ಹಿರೇಕೆರೂರ: ರಟ್ಟೀಹಳ್ಳಿ ತಾಲ್ಲೂಕಿನ ಚಿಕ್ಕಯಡಚಿ ಗ್ರಾಮದ ಮಲ್ಲನಗೌಡ ಶಿದ್ದಬಸನಗೌಡ ಸಣ್ಣಗೌಡ್ರ ಸಮಗ್ರ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.
ಅವಿಭಕ್ತ ಕುಟುಂಬದ 70 ಜಮೀನು ಇದ್ದು, 28 ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ದಾರೆ. ಅಣ್ಣ ತಮ್ಮಂದಿರು ಬೇರೆ ಬೇರೆ ಸ್ಥಳದಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
‘ಕೃಷಿ ಚಟುವಟಿಕೆಗಳನ್ನು ನಾನೇ ನೋಡಿಕೊಳ್ಳುತ್ತೇನೆ. 4 ಎಕರೆಯಲ್ಲಿ 200 ಸಪೋಟಾ (ಚಿಕ್ಕು) ಗಿಡಗಳನ್ನು ಬೆಳೆಯಲಾಗಿದ್ದು, ಅದೂ ಸಹ ಫಲಕ್ಕೆ ಬಂದಿದೆ. 200 ತೆಂಗಿನ ಗಿಡಗಳು, 600 ಸಾಗವಾನಿ ಗಿಡ, 5 ಹುಣಸೆ ಗಿಡಗಳು ಇವೆ’ ಎನ್ನುತ್ತಾರೆ ಮಲ್ಲನಗೌಡ.
ಜಮೀನಿಗೆ ಬೇಕಾದ ಗೊಬ್ಬರ ತಯಾರಿಸಲು ಜೀವಾಮೃತ ತೊಟ್ಟಿ, ಜೀವಸಾರ ಘಟಕ ಇದೆ. ಸರ್ಕಾರದ ಸಹಾಯಧನ ಪಡೆದು ಎರಡು ಕೃಷಿ ಹೊಂಡ ನಿರ್ಮಿಸಿದ್ದು, ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಯುವಾಗ ಹೊಂಡದಲ್ಲಿ ನೀರು ಸಂಗ್ರಹ ಮಾಡಿಕೊಂಡು ಅಡಿಕೆ ತೋಟಕ್ಕೆ ಬಿಡಲಾಗುತ್ತದೆ. ಕಾಲುವೆಯಲ್ಲಿ ನೀರು ಇಲ್ಲದಿದ್ದಾಗ ಕೊಳವೆ ಬಾವಿಗಳ ಮೂಲಕ ನೀರು ಸಂಗ್ರಹಿಸಲಾಗುತ್ತದೆ. ಒಟ್ಟು 10 ಕೊಳವೆ ಬಾವಿಗಳಿವೆ. ಎರಡು ಕಡೆ ಸೌರ ವಿದ್ಯುತ್ ಸಕ್ತಿ ಘಟಕ ಅಳವಡಿಸಿಕೊಂಡಿದ್ದು, ಹಗಲಿನಲ್ಲಿ ಇದರ ಮೂಲಕ ನೀರು ಹಾಯಿಸಲಾಗುತ್ತದೆ ಎಂದು ವಿವರಿಸಿದರು.
ಜಮೀನಿಗೆ ಸಾವಯವ ಗೊಬ್ಬರ ಬಳಕೆ, ಕೃಷಿಯಲ್ಲಿ ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭ ಗಳಿಸುವ ಮೂಲಕ ಮಾದರಿ ಎನಿಸುತ್ತಿದ್ದಾರೆ. ಇವರ ತೋಟವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ಹಾಗೂ ಕೃಷಿಯಲ್ಲಿ ಆಸಕ್ತಿ ಇರುವ ಅನೇಕರು ಬಂದು ನೋಡುತ್ತಿದ್ದಾರೆ. ಅಗತ್ಯ ಸಲಹೆ, ಸೂಚನೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.