ಶಿಗ್ಗಾವಿ: ‘ನಾಡಿನ ಮಠ–ಮಂದಿರಗಳು ಶಾಂತಿ, ನೆಮ್ಮದಿಯ ಕೇಂದ್ರಗಳಾಗಿದ್ದು, ಅವುಗಳಿಂದ ಸರ್ವ ಸಮುದಾಯದವರು ಒಂದಾಗಿ ಜೀವಿಸುತ್ತಿದ್ದಾರೆ’ ಎಂದು ಬಾಳೆಹೊನ್ನೂರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾನುವಾರ ನಡೆದ ವೀರಭಧ್ರೇಶ್ವರ ಸ್ವಾಮಿ, ಭದ್ರಕಾಳಿ ದೇವಿ, ನಂದೀಶ್ವರ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ, ಮಂಡಲ ಮಹಾಪೂಜಾ ಮುಕ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭಕ್ತಿ ಮಾರ್ಗದಲ್ಲಿ ಸಾಗಿದಾಗ ಮನುಷ್ಯ ಮೌಲ್ಯಾಧಾರಿತ ಬದುಕು ನಡೆಸಲು ಸಾಧ್ಯವಿದೆ. ತಂದೆ–ತಾಯಿ, ಗುರು–ಹಿರಿಯರನ್ನು ಗೌರವಿಸಿರಿ. ಪೋಷಕರ ಪೋಷಣೆ ಮಾಡುವ ಮೂಲಕ ಋಣ ತೀರಿಸಿ. ಧರ್ಮ ಪರಂಪರೆಯ ಚೌಕಟ್ಟಿನಲ್ಲಿ ಬದುಕು ನಡೆಸುವ ಜತೆಗೆ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿ’ ಎಂದು ಸಲಹೆ ನೀಡಿದರು.
ವೈದ್ಯ ಆರ್.ಎಸ್. ಅರಳೆಲೆಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಜೀಗಟ್ಟಿ ಶಿವಲಿಂಗೇಶ್ವರ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಸ್ವಾಮೀಜಿ, ರಟ್ಟಿಹಳ್ಳಿ ಶಿವಲಿಂಗ ಸ್ವಾಮೀಜಿ, ಹಾವೇರಿ ಶಿವಯೋಗಿ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಮುತ್ತಿಕಂತಿಮಠದ ಚಂದ್ರಶೇಖರ ಸ್ವಾಮೀಜಿ, ನೆಗಳೂರ ಗುರುಶಾಂತ ಸ್ವಾಮೀಜಿ, ಹಾವೇರಿ ಅಭಿನವ ರುದ್ರಚನ್ನಮಲ್ಲಿಕಾಶರ್ಜುನ ಸ್ವಾಮೀಜಿ, ಹಿರೇಬೆಂಡಿಗೇರಿ ವೀಶ್ವೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವೀರಭದ್ರೇಶ್ವರ ಸೇವಾ ಸಮಿತಿ, ರುದ್ರಮುನೀಶ್ವರ ಸೇವಾ ಸಮಿತಿ ಸದಸ್ಯರು ಇದ್ದರು.
ಬೆಳಿಗ್ಗೆ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಗುಗ್ಗಳ ಮಹೋತ್ಸವ ವೀರಭದ್ರೇಶ್ವರ ದೇವಸ್ಥಾನದವರೆಗೆ ನಡೆಯಿತು. ಕುಂಭ ಹೊತ್ತ ಮಹಿಳೆಯರು, ಝಾಂಜ್ ಮೇಳ ಸೇರಿದಂತೆ ವಿವಿಧ ವಾದ್ಯಗಳು, ಪುರವಂತಿಕೆ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.