ಸವಣೂರ: ಕ್ಷೇತ್ರಕ್ಕೆ ಆಗಮಿಸಿರುವುದುತವರು ಮನೆಗೆ ಆಗಮಿಸಿದಷ್ಟು ಸಂತೋಷವಾಗಿದೆ. ಪ್ರೀತಿ ವಿಶ್ವಾಸವನ್ನು ಕೊಟ್ಟ ತವರನ್ನು ಎಂದಿಗೂ ಮರೆಯಲಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.
ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕೈಗೊಂಡು, ದೊಡ್ಡ ಹುಣಸೆ ಕಲ್ಮಠದ ಆವರಣದಲ್ಲಿ ನಿರ್ಮಿಸಲಾದ ನೂತನ ಚನ್ನಬಸವೇಶ್ವರ ಮಂಗಲ ಭವನ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಶ್ರೀಮಂತಿಕೆ ರಸ್ತೆಗಳ, ವಿವಿಧ ಕಾಮಗಾರಿಗಳ ಅಭಿವೃದ್ಧಿಯಲ್ಲಿಲ್ಲ. ಸಮಾಜದಲ್ಲಿನ ಜನರು ಶಾಂತಿ ನೆಮ್ಮದಿಯಿಂದ ಬದುಕುವ ವಾತಾವರಣದ ನಿರ್ಮಾಣದಲ್ಲಿ ಶ್ರೀಮಂತಿಕೆ ಅಡಗಿದೆ. ನನ್ನ ಜವಾಬ್ದಾರಿ ರಾಜ್ಯಮಟ್ಟದಲ್ಲಿ ಎಷ್ಟು ಹೆಚ್ಚಾಗಿದೆಯೋ ಕ್ಷೇತ್ರದಲ್ಲೂ ಅಷ್ಟೇ ಹೆಚ್ಚಾಗಿದೆ. ದೇಶದ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಹಾಗೂ ವಿಶೇಷವಾಗಿ ಯಡಿಯೂರಪ್ಪನವರ ಆಶೀರ್ವಾದದಿಂದ ಕನ್ನಡ ನಾಡಿನ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಹೇಳಿದರು.
ಕ್ಷೇತ್ರದ ಸೇವೆಯ ಜೊತೆಗೆ ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿ ಹಾಗೂ ಎಲ್ಲ ರೀತಿಯ ಸಕಾರಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸವಣೂರಿನ ಅಭಿವೃದ್ಧಿಯನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಮಾಡುವ ಸಂಕಲ್ಪವನ್ನು ಮಾಡಿದ್ದೇನೆ. ಶ್ರೀಕ್ಷೇತ್ರ ದೊಡ್ಡ ಹುಣಸೇಕಲ್ಮಠ ಈಗಾಗಲೇ ಪ್ರವಾಸಿ ತಾಣವಾಗಿದೆ. ಮುಂದಿನ ದಿನಗಳಲ್ಲಿ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮಂಗಲ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ರುದ್ರಮ್ಮ ರೇವಣಸಿದ್ದಯ್ಯ ಕಲ್ಮಠ ಅವರನ್ನು ಶ್ರೀಮಠದ ವತಿಯಿಂದ ಬೊಮ್ಮಾಯಿ ಸನ್ಮಾನಿಸಿದರು. ಶ್ರೀಮಠದ ಚನ್ನಬಸವೇಶ್ವರ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವವಹಿಸಿದ್ದರು.
ಬೈಲೂರು ನಿಜಗುಣ ಸ್ವಾಮಿಗಳು, ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮೀಜಿ, ಬೀದರ್ ಜಿಲ್ಲೆಯ ಹಿರೇನಾಗಾವ ಮಠದ ಜಯಶಾಂತಲಿಂಗ ಸ್ವಾಮೀಜಿ, ಶಿಗ್ಗಾಂವ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಧಾರವಾಡ ಬಸವಾನಂದ ಸ್ವಾಮೀಜಿ, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮಿಜಿಗಳು ಸೇರಿದಂತೆ ತಾಲ್ಲೂಕಿನ ಸಾರ್ವಜನಿಕರು ಇದ್ದರು. ಅಥಣಿ ಮೋಟಗಿಮಠದ ಚನ್ನಬಸವ ಮಹಾಸ್ವಾಮಿಗಳು ಕಾರ್ಯಕ್ರಮ ನಿರ್ವಹಿಸಿದರು.
ಮನವಿಗಳ ಮಹಾಪೂರ:
ಕಾರ್ಯಕ್ರಮದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಜನರಿಂದ ಮನವಿಗಳ ಮಹಾಪೂರವೇ ಹರಿದು ಬಂದಿತು. ಮನವಿ ಸಲ್ಲಿಸಲು ಬಂದ ಕ್ಷೇತ್ರದ ಜನರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರೀತಿಯಿಂದ ಮಾತನಾಡಿಸುತ್ತ, ಅತ್ಯಂತ ಶಾಂತ ಚಿತ್ತದಿಂದ ಎಲ್ಲರಿಂದಲೂ ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.