ಶಿಗ್ಗಾವಿ: ‘ಎರಡು ವರ್ಷಗಳಿಂದ ಪಿಂಚಣಿ ಬಾರದೆ ಜೀವನ ನಿರ್ವಹಣೆ ತೀವ್ರ ಕಷ್ಟವಾಗಿದೆ. ಹಾಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು’ ಎಂದು ಬಂಕಾಪುರದ ನಿವೃತ್ತಶಿಕ್ಷಕಿ ಸುಮಂಗಲಾ ಪರ್ವತಗೌಡ ಪಾಟೀಲ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
‘1989ರಲ್ಲಿ ಬಂಕಾಪುರದಅನುದಾನ ರಹಿತ ಕೀರ್ತಿ ಪ್ರೌಢಶಾಲೆಯಲ್ಲಿಕನ್ನಡ ಭಾಷಾ ಶಿಕ್ಷಕಿಯಾಗಿ, 2006ವರೆಗೆ ಉಚಿತ ಸೇವೆ ಸಲ್ಲಿಸಿದ್ದೇನೆ. ನಂತರ 12 ವರ್ಷ 7 ತಿಂಗಳು ಸರ್ಕಾರದ ವೇತನ ಪಡೆದು ಕರ್ತವ್ಯ ನಿರ್ವಹಿಸಿದ್ದೇನೆ. 2018ರಲ್ಲಿ ನಿವೃತ್ತಿಯಾಗಿದ್ದು, ತಿಂಗಳಿಗೆ ಸುಮಾರು 21 ಸಾವಿರ ಪಿಂಚಣಿ ಬರಬೇಕಿತ್ತು. ಇದುವರೆಗೆ ಪಿಂಚಣಿ ಹಣವೇ ಬಂದಿಲ್ಲ’ ಎಂದು ಅಳಲು ತೋಡಿಕೊಂಡರು.
‘ನನ್ನ ಪತಿ ನಿವೃತ್ತ ಶಿಕ್ಷಕನಾಗಿದ್ದು, ನಮಗೆ ಮಕ್ಕಳಿಲ್ಲ. ಸ್ವಂತ ಮನೆ ಮತ್ತು ಜಮೀನು ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ.ಕೂಲಿ ಮಾಡಿ ಬದುಕೋಣ ಎಂದರೆ ದುಡಿಮೆ ಮಾಡುವಷ್ಟು ಶಕ್ತಿಯಿಲ್ಲ. ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ತೃಪ್ತಿ ಬಿಟ್ಟರೆ ಬೇರಾವುದೇ ಸೌಕರ್ಯಗಳು ನಮಗೆ ಸಿಕ್ಕಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.
‘ರಾಜ್ಯದಲ್ಲಿ 60 ಸಾವಿರಕ್ಕಿಂತ ಹೆಚ್ಚು ಅನುದಾನಿತ ಶಾಲಾ, ಕಾಲೇಜುಗಳಲ್ಲಿ ಬೋಧಕ– ಬೋಧಕೇತರ ಸಿಬ್ಬಂದಿ ವಯೋ ನಿವೃತ್ತಿ ಹೊಂದಿದ್ದು, ಸರ್ಕಾರ ಅವರ ಸೇವಾ ಅವಧಿ ಪರಿಗಣಿಸಿ ಪಿಂಚಣಿ ಯೋಜನೆ ಜಾರಿಗೆ ತರಬೇಕು’ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.