ಗುತ್ತಲ (ಹಾವೇರಿ): ಇಲ್ಲಿಗೆ ಸಮೀಪದ ಹರಳಹಳ್ಳಿ, ಕಂಚಾರಗಟ್ಟಿ ಮತ್ತು ಹಾವನೂರ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಗಳ ಮೇಲೆ ಮಂಗಳವಾರ ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ನೇತೃತ್ವದ ತಂಡ ದಾಳಿ ನಡೆಸಿ, 2 ತೆಪ್ಪಗಳನ್ನು ನಾಶ ಮಾಡಿದೆ.
‘ಹಾವನೂರ ಗ್ರಾಮದಲ್ಲಿ ಸ್ವಲ್ಪ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ದಾಳಿ ಮಾಡಲಾಗುವುದು. ಹರಳಹಳ್ಳಿ ಗ್ರಾಮದ ಹಲವಾರು ಮನೆಗಳ ಎದುರು ಅಕ್ರಮ ಮರಳು ಸಂಗ್ರಹಿಸಲಾಗಿತ್ತು. ಎಲ್ಲ ಮರಳನ್ನು ಗುತ್ತಲ ಪೊಲೀಸ್ ಠಾಣೆಗೆ ಸಾಗಿಸುವಂತೆ ಪಿಎಸ್ಐಗೆ ಸೂಚಿಸಲಾಗಿದೆ’ ಎಂದು ತಿಪ್ಪೇಸ್ವಾಮಿ ಹೇಳಿದರು.
ನಿರಂತರ ದಾಳಿಗೆ ಸೂಚನೆ:ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರಾಕ್ಟರ್ ಮತ್ತು ಲಾರಿಗಳನ್ನು ಹೊಂದಿದವರು ಅಕ್ರಮ ಸಾಗಣೆಗಳಲ್ಲಿ ತೊಡಗಿದ್ದರೆ, ಅಂಥವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದೇನೆ.ಈ ಭಾಗದಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ಪ್ರತಿದಿನ ತಹಶೀಲ್ದಾರ್, ಇಒ ಮತ್ತು ಪಿಎಸ್ಐ ಸೇರಿ ದಾಳಿ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಾವನೂರ ಗ್ರಾಮದಲ್ಲಿ ಪ್ರತಿದಿನ ನಿರಂತರವಾಗಿ ಬಾರಿ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಮೂರು ವರ್ಷದಿಂದೀಚೆಗೆ ಯಾವ ಅಧಿಕಾರಿಗಳೂ ಶಾಕಾರ ಗ್ರಾಮಕ್ಕೆ ಹೋಗುವ ತುಂಗಭದ್ರಾ ನದಿಯ ದಡದಲ್ಲಿ ದಾಳಿ ನಡೆಸಿರಲಿಲ್ಲ. ಆದರೆ ಇಂದು ದಾಳಿ ಮಾಡಿದ್ದಾರೆ. ಆದರೆ ಅಧಿಕಾರಿಗಳಿಗೆ ಏನು ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ದಾಳಿಯ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎಸ್. ಶಂಕರ್, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಸಿಪಿಐ ಸಂತೋಷ ಪವಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಧುಸೂದನ್, ಕೃಷ್ಣಾ ಪೂಜಾರ, ಸುಭಾಸಚಂದ್ರ, ಉಪತಹಶೀಲ್ದಾರ್ ಎಂ.ಡಿ.ಕಿಚಡೇರ, ಕಂದಾಯ ನಿರೀಕ್ಷಕ ಆರ್.ಎನ್.ಮಲ್ಲಾಡದ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಉಜನಿ, ಪಿಎಸ್ಐ ಶಂಕರಗೌಡ ಪಾಟೀಲ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.