ಕುಮಾರಪಟ್ಟಣ (ಹಾವೇರಿ ಜಿಲ್ಲೆ):ನನ್ನ ಆತ್ಮಕತೆಯನ್ನು ಬರೆದರೆ, ‘ಪ್ರಜಾಪ್ರಭುತ್ವದಲ್ಲಿ ನಾನು ಯಾರು?’ ಎಂಬ ಹೆಸರು (ಶೀರ್ಷಿಕೆ) ಇಡುತ್ತೇನೆ ಎಂದು ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದರು.
ಇಲ್ಲಿನ ಗ್ರಾಸಿಂ ಸಿರಿಗನ್ನಡಂ ಪ್ರೌಢಶಾಲೆ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ‘ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ 2013ರಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆಯಲ್ಲಿ ಬಂದ ಸಚಿವರೊಬ್ಬರು, ನಮ್ಮನ್ನು (ಜನಪ್ರತಿಧಿಗಳನ್ನು) ಪ್ರಶ್ನಿಸಲು ನೀವು ಯಾರು? ಎಂದು ಕೇಳಿದ್ದರು’ ಎಂದರು.
ಅದಕ್ಕಾಗಿ, ನಾನು ಈ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದ ಅವರು, ಅಲ್ಲಿಂದ ಇಲ್ಲಿ ತನಕ (2013–18) ತನಕವೂ ಕಾಯಿದೆಯನ್ನು ಅನುಷ್ಠಾನಕ್ಕೆ ತಂದಿಲ್ಲ. ನಾವೂ, ಅಂದು ತಾಲ್ಲೂಕು ಮಟ್ಟದಲ್ಲಿ ಹೋರಾಟ ನಡೆಸಬೇಕಿತ್ತು. ಅಲ್ಲದೇ, ಹೋರಾಟವನ್ನು ಸ್ಥಗಿತಗೊಳಿಸಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
‘ಜನ ಸೇವಕರೇ, ಇಂದು ‘ಮಾಲೀಕ’ರಂತೆ ನಡೆದುಕೊಳ್ಳುತ್ತಿದ್ದಾರೆ. ಅಂದು ಹಣವಂತರು ಅನ್ಯಾಯ ಮುಚ್ಚಿ ಹಾಕಲು ಸಾಕ್ಷಿಗಳನ್ನು ಖರೀದಿಸುತ್ತಿದ್ದರೆ, ಇಂದು ಜಡ್ಜ್, ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ. ಸಮಾಜದ ಬದಲಾವಣೆಯಿಂದ ಮಾತ್ರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಬದಲಾವಣೆ ಸಾಧ್ಯ. ಅದಕ್ಕಾಗಿ ಹಣ, ಜಾತಿ, ಧರ್ಮ, ಭಾಷೆ ಮತ್ತಿತರ ಅಮಲಿನಲ್ಲಿ ನಮ್ಮ ವೋಟ್ ಅನ್ನು ಮಾರುವುದನ್ನು ಬಿಡಬೇಕು. ತೃಪ್ತಿ ಮತ್ತು ಮಾನವೀಯತೆಯು ನಮ್ಮ ಬದುಕಾಗಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.