ಹಾವೇರಿ: ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ವಿರುದ್ಧ ಕೋಲಾರ ಸಂಸದ ಮುನಿಸ್ವಾಮಿ ಅವರ ರಾಜಕೀಯ ಪ್ರೇರಿತ ಆರೋಪ ಖಂಡಿಸಿ ಹಾಗೂ ಸಂಸದ ಮುನಿಸ್ವಾಮಿ ಮೇಲೆ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿ ಹಾವೇರಿಯ ತಹಶೀಲ್ದಾರ್ ಜಿ.ಎಸ್.ಶಂಕರ್ ಅವರಿಗೆ ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐಫೋನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ವೇತನ ಸಮಸ್ಯೆ ಬಗೆಹರಿಸಲು ಶನಿವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದ್ದರು. ಆದರೆ ಈ ಘಟನೆಗೆ ಎಸ್ಎಫ್ಐಗೆ ಸಂಬಂಧವಿಲ್ಲದಿದ್ದರೂ ‘ಎಸ್ಎಫ್ಐ ಸಂಘಟನೆ ಹೊರ ರಾಜ್ಯದ ಜನರನ್ನು ಕರೆಸಿಕೊಂಡು ದಾಂಧಲೆಯನ್ನು ಮಾಡಿದೆ’ ಎಂದು ಕೋಲಾರದ ಸಂಸದ ಎಸ್. ಮುನಿಸ್ವಾಮಿ ರಾಜಕೀಯ ಪ್ರೇರಿತ ಆರೋಪ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಎಸ್ಎಫ್ಐ ಯಾವುದೇ ಪ್ರತಿಭಟನೆಯನ್ನು ಸಂಘಟಿಸಿರಲಿಲ್ಲ. ಅನವಶ್ಯವಾಗಿ ವಿದ್ಯಾರ್ಥಿ ಸಂಘಟನೆಯ ಹೆಸರನ್ನು ಎಳೆದು ತರುವ ಪ್ರಯತ್ನವನ್ನು ಸಂಸದರು ನಡೆಸಿರುವುದು ಅವರ ಬೇಜವಾಬ್ದಾರಿತನ ತೋರುತ್ತದೆ. ಬಿಜೆಪಿ, ಆರೆಸ್ಸೆಸ್ ಶಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಎಸ್ಎಫ್ಐ ವಿರುದ್ಧ ಅಪಪ್ರಚಾರ ನಡೆಸಿ ಎಸ್ಎಫ್ಐ ಸಂಘಟನೆಗೆ ಕೆಟ್ಟ ಹೆಸರು ತರಲು ಹೊರಟಿರುವುದು ಸರಿಯಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಜಿಲ್ಲಾ ಮುಖಂಡರಾದ ಸಿದ್ದಪ್ಪ ಅಂಗಡಿ, ಪ್ರಸನ್ನ ಕಡಕೋಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.