ಹಾನಗಲ್: ‘ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸೇರಿದಂತೆ ಸಾಕಷ್ಟು ಪ್ರಯೋಜನಗಳು ಬಿಜೆಪಿ ನೇತೃತ್ವದ ಸರ್ಕಾರದಿಂದ ದೊರೆತಿವೆ. ಉಪ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲುತ್ತದೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ತಾಲ್ಲೂಕಿನ ಆಡೂರ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸಂಸದ ಶಿವಕುಮಾರ ಉದಾಸಿ ಕುಶಲಮತಿ ರಾಜಕಾರಣಿ. ಶಿವಕುಮಾರ ಅವರು ರಾಜ್ಯ ಬಿಜೆಪಿ ಮಟ್ಟಿಗೆ ಅರುಣ ಜೇಟ್ಲಿ ಇದ್ದಂತೆ’ ಎಂದರು.
ಶಿವಕುಮಾರ ಉದಾಸಿ ಮಾತನಾಡಿ, ‘ಇದು ಚುನಾವಣೆ ಸಮಯ. ನಾವು ರಾಜಕಾರಣಿಗಳು ಮತದಾರರ ಬಳಿಗೆ ಬರುತ್ತೇವೆ. ಮತದಾರರು ಯೋಚಿಸಿ ಮತ ನೀಡಬೇಕು. ಮುಂದಿನ 5 ವರ್ಷ ನೀವೇ ಚುನಾಯಿಸಿದ ಪ್ರತಿನಿಧಿ ಮನೆ ಮುಂದೆ ಕೈ ಮುಗಿದು ನಿಲ್ಲುವ ಸ್ಥಿತಿ ಬೇಡ. ಸಮರ್ಥರನ್ನು ಗೆಲ್ಲಿಸಿ’ ಎಂದರು.
ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ನೀರಾವರಿ ಸೌಲಭ್ಯ, ಬೆಳೆವಿಮೆ ಜಾಗೃತಿಗೆ ಹಾನಗಲ್ ತಾಲ್ಲೂಕು ಹೆಸರಾಗಿದೆ. ಇದಕ್ಕೆ ಸಿ.ಎಂ.ಉದಾಸಿ ಅವರ ಕರ್ತೃತ್ವ ಶಕ್ತಿ ಕಾರಣವಾಗಿದೆ’ ಎಂದರು.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಮುಖಂಡರಾದ ಸಿ.ಆರ್. ಬಳ್ಳಾರಿ, ಬಸವರಾಜ ಹಾದಿಮನಿ, ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ನಿಜಲಿಂಗಪ್ಪ ಮುದಿಯಪ್ಪನವರ, ಮಾಲತೇಶ ಗಂಟೇರ, ರಂಗಣ್ಣ ಲಂಗಟಿ ಇದ್ದರು.
ಇದೇ ವೇಳೆ ಕಾಂಗ್ರೆಸ್ ತೊರೆದ ಕೆಲವರು ಬಿಜೆಪಿ ಸೇರ್ಪಡೆಗೊಂಡರು. ಬಳಿಕ ತಾಲ್ಲೂಕಿನ ಶೀಗಿಹಳ್ಳಿ, ಶಂಕ್ರಿಕೊಪ್ಪ ಮತ್ತು ಕಂಚಿನೆಗಳೂರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.