ADVERTISEMENT

ಹಾವೇರಿ | ಕಿಡಿಗೇಡಿಗಳಿಂದ ಕಲ್ಲುತೂರಾಟ: 15 ಯುವಕರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 5:11 IST
Last Updated 15 ಮಾರ್ಚ್ 2023, 5:11 IST
ರಟ್ಟೀಹಳ್ಳಿ ಪಟ್ಟಣದಲ್ಲಿ ಮಂಗಳವಾರ ಸಂಗೊಳ್ಳಿ ರಾಯಣ್ಣನ ಭಾವಚಿತ್ರದೊಂದಿಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು ಈ ವೇಳ ಕಲ್ಲುತೂರಾಟದಲ್ಲಿ ಕಾರಿನ ಕ್ಲಾಸ್ ಪುಡಿ-ಪುಡಿಯಾಗಿರುವುದು
ರಟ್ಟೀಹಳ್ಳಿ ಪಟ್ಟಣದಲ್ಲಿ ಮಂಗಳವಾರ ಸಂಗೊಳ್ಳಿ ರಾಯಣ್ಣನ ಭಾವಚಿತ್ರದೊಂದಿಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು ಈ ವೇಳ ಕಲ್ಲುತೂರಾಟದಲ್ಲಿ ಕಾರಿನ ಕ್ಲಾಸ್ ಪುಡಿ-ಪುಡಿಯಾಗಿರುವುದು   

ರಟ್ಟೀಹಳ್ಳಿ: ಪಟ್ಟಣದಲ್ಲಿ ರಾಯಣ್ಣನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ನಿಮಿತ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣನ ಭಾವಚಿತ್ರದ ಮೆರವಣಿಗೆ, ಬೈಕ್ ರ‍್ಯಾಲಿ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಕಾರಂಜಿ ಮಸೀದಿ ಹತ್ತಿರ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಜನರನ್ನು ಚದುರಿಸಿದರು. ಎಸ್ಪಿ ಶಿವಕುಮಾರ ಗುಣಾರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಾರ್ಚ್ 9ರಂದು ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಮೆರವಣಿಗೆ ನಡೆಯುತ್ತಿದ್ದಾಗ ಕೋಟೆ ಪ್ರದೇಶದಲ್ಲಿ ಕೆಲ ಮುಸ್ಲಿಂ ಯುವಕರು ಕೈಯ್ಯಲ್ಲಿ ಕಲ್ಲುಗಳನ್ನು ಹಿಡಿದು ನಿಂತಿದ್ದರು. ಪೊಲೀಸರು ಮಾರ್ಗ ಬದಲಾಯಿಸಿ, ಮೆರವಣಿಗೆ ಶಾಂತಿಯುತವಾಗಿ ಸಾಗುವಂತೆ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.

ADVERTISEMENT

ಇದರಿಂದ ಆಕ್ರೋಶಗೊಂಡಿದ್ದ ಹಿಂದೂ ಯುವಕರು ಅದೇ ಮಾರ್ಗದಲ್ಲಿ ಮತ್ತೆ ಮೆರವಣಿಗೆ, ಬೈಕ್ ರ‍್ಯಾಲಿ ನಡೆಸಲು ಮಂಗಳವಾರ ತೀರ್ಮಾನಿಸಿದ್ದರು. ಬೈಕ್‌ ರ‍್ಯಾಲಿ ನಡೆಸುವ ಸ್ಥಳಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸ್ಥಳಕ್ಕೆ ಆಗಮಿಸಿ, ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿದರು.

ನಂತರ ಕೇಸರಿ ಧ್ವಜ ಹಿಡಿದು ಬೈಕ್‌ಗಳಲ್ಲಿ ಸಾಗಿದ ಹೊರಟ ರ‍್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಾರಂಜಿ ಮಸೀದಿ ಬಳಿ ಸಂದರ್ಭ ಕೆಲ ಕಿಡಿಗೇಡಿಗಳು ಪ್ರಾರ್ಥನಾ ಮಂದಿರ ಹಾಗೂ ಕೆಲವು ಮನೆಗಳ ಮೇಲೆ ಕಲ್ಲು ತೂರಿದ
ಅಹಿತಕರ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.