ಪ್ರಜಾವಾಣಿ ವಾರ್ತೆ
ಬ್ಯಾಡಗಿ: ಕ್ಷಯರೋಗ ಎಂಬುದು ಗಂಭೀರ ಮತ್ತು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಪ್ರಸ್ತುತ ಸೂಕ್ತ ಚಿಕಿತ್ಸೆಯ ಮೂಲಕ ನಿಯಂತ್ರಿಸಲು ಸಾಧ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ ಭಾರತ, ಏಡ್ಸ್, ರೇಬಿಸ್ ಚುಚ್ಚುಮದ್ದು ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಸಕ್ರೀಯ ಕ್ಷಯ ರೋಗಿಗಳು ಕೆಮ್ಮಿದಾಗ, ಸೀನಿದಾಗ ಸಣ್ಣ ಹನಿಗಳ ರೂಪದಲ್ಲಿ ಬ್ಯಾಕ್ಟೀರಿಯಾ ಗಾಳಿಯ ಮೂಲಕ ಇತರರಿಗೆ ಹರಡುತ್ತದೆ. ಈ ಕುರಿತು ಜಾಗೃತಿ ಅಗತ್ಯ. ಕಳೆದ ವರ್ಷ 25 ಲಕ್ಷ ಜನರಿಗೆ ಕ್ಷಯ ರೋಗವಿರುವುದನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಗಿದೆ’ ಎಂದರು.
ಡಾ.ಬಿ.ಎನ್.ದೇವೆಂದ್ರ ಮಾತನಾಡಿ, ‘ಪೋಲಿಯೊ ಮುಕ್ತಗೊಳಿಸಿದ ಮದರಿಯಲ್ಲಿ ಕ್ಷಯರೋಗವನ್ನು ಮುಕ್ತಗೊಳಿಸಲು ಸರ್ಕಾರ ಹಾಕಿಕೊಂಡಿರುವ ಕಾರ್ಯಕ್ರಮಕ್ಕೆ ಜನರ ಸಹಕಾರ ಅಗತ್ಯ’ ಎಂದರು.
ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕು. ಕ್ಷಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸರ್ಕಾರಿ ಅಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಮಲ್ಲಿಕಾರ್ಜುನ ಕಡ್ಡಿಪುಡಿ, ಡಾ.ಎಂ.ವಿ. ಕಮ್ಮಾರ, ಡಾ.ಸತೀಶ, ಸಿಬ್ಬಂದಿ ಜೆ.ಪಿ.ವಿನಾಯಕ, ಡಿ.ಎನ್.ಚಂದ್ರಶೇಖರ, ವಿ.ಮಮತಾ, ವಿ.ರೇಶ್ಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.