ADVERTISEMENT

ಐಎಎಸ್‌ಗಳ ಬೀದಿರಂಪ: ಸರ್ಕಾರದ ಘನತೆಗೆ ಕುಂದು -ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 11:16 IST
Last Updated 5 ಜೂನ್ 2021, 11:16 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹಾವೇರಿ: ‘ಮೈಸೂರಿನ ಐಎಎಸ್‌ ಅಧಿಕಾರಿಗಳು ಬಹಿರಂಗವಾಗಿ ಕಿತ್ತಾಡುವುದು ಸರಿಯಲ್ಲ. ಎಲ್ಲರೂ ನಿಯಮಗಳಡಿ ಕೆಲಸ ಮಾಡಬೇಕು. ಸರ್ಕಾರ ಮತ್ತು ಇಲಾಖೆಗಿಂತ ಯಾರೂ ದೊಡ್ಡವರಲ್ಲ.ಈ ರೀತಿ ಬೀದಿರಂಪ ಮಾಡುವುದರಿಂದ ಸರ್ಕಾರದ ಘನತೆಗೆ ಕುಂದು ಬರುತ್ತದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರು ಸಾತೇನಹಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ,‘ಐಎಎಸ್‌ ಅಧಿಕಾರಿಗಳು ಅವರ ಇತಿಮಿತಿ ಅರಿತು ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಾಯಕತ್ವದಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ. ಬಿ.ಎಸ್‌.ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಸಮಸ್ಯೆಯಿಲ್ಲ. ಕೃತಕ ಅಭಾವ ಸೃಷ್ಟಿಸುವ ವರ್ತಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಅಕ್ರಮ ದಾಸ್ತಾನು ಮಾಡಿದವರ ವಿರುದ್ಧ ಕೃಷಿ ವಿಚಕ್ಷಣಾ ದಳದಿಂದ ಹಲವು ಪ್ರಕರಣಗಳು ದಾಖಲಾಗಿವೆ. ಮುಂಗಾರು ಬಿತ್ತನೆಗೆ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.