ADVERTISEMENT

ಈ ಕಾಲೇಜಿಗೆ ರಾಜ್ಯದಲ್ಲೇ 4ನೇ ಸ್ಥಾನ

ಗುಣಮಟ್ಟದ ಬೋಧನೆ ಮತ್ತು ಉತ್ತಮ ಫಲಿತಾಂಶಕ್ಕೆ ಹೆಸರುವಾಸಿ: ಕಲಿಕಾಸ್ನೇಹಿ ವಾತಾವರಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ಸವಣೂರ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ನಿರತರಾಗಿರುವ ದೃಶ್ಯ
ಸವಣೂರ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ನಿರತರಾಗಿರುವ ದೃಶ್ಯ   

ಸವಣೂರ:ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ ಮತ್ತು ಉತ್ತಮ ಫಲಿತಾಂಶದಿಂದಾಗಿವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.

2009-10ರಲ್ಲಿ ಆರಂಭಗೊಂಡ ಈ ವಿಜ್ಞಾನ ಕಾಲೇಜಿನಲ್ಲಿ ಆರಂಭಿಕ ವರ್ಷ 34 ವಿದ್ಯಾರ್ಥಿಗಳ ಪ್ರವೇಶಾತಿ ಪಡೆದಿದ್ದರು.ಮೂರು ವರ್ಷಗಳಿಂದ ಪ್ರವೇಶಾತಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ. 2020-21ರಲ್ಲಿ 143 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ‌

ನಾಲ್ಕು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶ ಕೂಡ ಉತ್ತಮವಾಗಿದೆ. 2016-17ರಲ್ಲಿ ಶೇ 92.24, 2017-18ರಲ್ಲಿ ಶೇ 93.75, 2018-19ರಲ್ಲಿ ಶೇ 95.08, 2019-20ರಲ್ಲಿ ಶೇ 97.18ರಷ್ಟು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಒಟ್ಟು 72 ಕಾಲೇಜುಗಳಲ್ಲಿ ಸವಣೂರ ತಾಲ್ಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿಗೆ ರಾಜ್ಯದಲ್ಲೇ ನಾಲ್ಕನೇ ಸ್ಥಾನ ಸಿಕ್ಕಿದೆ.

ADVERTISEMENT

ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸವಣೂರ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗಕ್ಕೆ ಬರುತ್ತಿರುವುದು ಕಾಲೇಜಿನ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಶಾಲಾ– ಕಾಲೇಜುಗಳು ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ‘ಆನ್‌ಲೈನ್‌ ಪಾಠ’ ಮಾಡಲಾಗಿತ್ತು. ಇಂಟರ್‌ನೆಟ್‌ ತೊಂದರೆಯಿಂದ ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಇದನ್ನು ಅರಿತ ಶಿಕ್ಷಕರುಕಾಲೇಜು ಪ್ರಾರಂಭವಾಗುತ್ತಿದ್ದಂತೆ, ಶಿಕ್ಷಕರು ವಿಶೇಷ ತರಗತಿಗಳ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾದರು.

ಸ್ಪರ್ಧಾತ್ಮಕ ಪರೀಕ್ಷೆಗೆಬೇಕಾದ ಪುಸ್ತಕಗಳ ಭಂಡಾರವನ್ನು ತೆರೆದಿಟ್ಟು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಗ್ರಂಥಾಲಯ ಸೌಲಭ್ಯದಿಂದ ಕಳೆದ 2019-20ನೇ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿ ಕಿರಿಯ ಸಹಾಯಕ ಎಂಜಿನಿಯರ್‌ ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದರೆ, ಒಬ್ಬ ವಿದ್ಯಾರ್ಥಿನಿ ಎಂ.ಬಿ.ಬಿ.ಎಸ್ ಶಿಕ್ಷಣ ಪಡೆಯಲು ಆಯ್ಕೆಯಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ 6ರಿಂದ 8ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗುವ ನಿರೀಕ್ಷೆಯಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಗುರುಬಸಮ್ಮ ಶೆಟ್ಟರ ಆಶಾಭಾವ ವ್ಯಕ್ತಪಡಿಸಿದರು.

ಪ್ರಯೋಗಾಲಯಗಳು, ಕಂಪ್ಯೂಟರ್ ತರಗತಿ, ಸ್ಮಾರ್ಟ್ ಕ್ಲಾಸ್‌ ಸೌಲಭ್ಯಗಳಿವೆ. ರಸಪ್ರಶ್ನೆ, ಚರ್ಚಾ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.ಪ್ರತಿಯೊಬ್ಬ ಶಿಕ್ಷಕರಿಗೆ ತಲಾ 10 ವಿದ್ಯಾರ್ಥಿಗಳನ್ನು ದತ್ತು ನೀಡಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಕ್ರೈಸ್ ವತಿಯಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಕಾಲೇಜಿನ ಪ್ರಾಂಶುಪಾಲರಾದ ಗುರುಬಸಮ್ಮ ಶೆಟ್ಟರ ಸೇರಿದಂತೆ ಉಪನ್ಯಾಸಕರಾದ ಸತೀಶ ಗೌಡರ, ಸಂತೋಷ ಮಾಳಾಪೂರ, ಸೌಮ್ಯಾ ಮುಧ್ದಿ, ಮೇಘರಾಜಲಾಲ ಪಾಟೀಲ ಸೇರಿದಂತೆ ಒಟ್ಟು ಐವರು ಉಪನ್ಯಾಸಕರಿಗೆ ಪುರಸ್ಕಾರ ಲಭಿಸಿದೆ.

ಕಾಲೇಜಿನ ಆವರಣದಲ್ಲಿ ವಿವಿಧ ಬಗೆಯ ಹೂವು– ಹಣ್ಣು, ಆಲಂಕಾರಿಕ ಗಿಡಗಳನ್ನು ನೆಡುವ ಮೂಲಕ ಕಾಲೇಜಿನ ಸೌಂದರ್ಯವನ್ನು ಹೆಚ್ಚಿಸಿ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.