ADVERTISEMENT

ಉಕ್ಕಿದ ತುಂಗಭದ್ರಾ: ಪ್ರವಾಹದ ಭೀತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 15:20 IST
Last Updated 16 ಜುಲೈ 2022, 15:20 IST
ತುಂಗಭದ್ರಾ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಶನಿವಾರ ಕುಮಾರಪಟ್ಟಣ ಸಮೀಪದ ಮಾಕನೂರು ಗ್ರಾಮದ ಬಳಿ ರೈತರ ಅಡಿಕೆ ಬೆಳೆ, ಬ್ಯಾರೇಜ್‌ ನಿರ್ಮಾಣ ಮಾಡುವ ಕಾರ್ಮಿಕರ ಶೆಡ್‌ಗಳು ಹಾಗೂ ವಾಹನಗಳು ಜಲಾವೃತಗೊಂಡಿವೆ
ತುಂಗಭದ್ರಾ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಶನಿವಾರ ಕುಮಾರಪಟ್ಟಣ ಸಮೀಪದ ಮಾಕನೂರು ಗ್ರಾಮದ ಬಳಿ ರೈತರ ಅಡಿಕೆ ಬೆಳೆ, ಬ್ಯಾರೇಜ್‌ ನಿರ್ಮಾಣ ಮಾಡುವ ಕಾರ್ಮಿಕರ ಶೆಡ್‌ಗಳು ಹಾಗೂ ವಾಹನಗಳು ಜಲಾವೃತಗೊಂಡಿವೆ   

ಕುಮಾರಪಟ್ಟಣ: ಮಲೆನಾಡು ಭಾಗ ಸೇರಿದಂತೆ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಹೆಚ್ಚುವರಿ ನೀರು ಬಿಟ್ಟ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ನೀರಿನ ಪ್ರಮಾಣ ಹೆಚ್ಚಾಗಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ತಂದೊಡ್ಡಿದೆ.

ನದಿ ಪಾತ್ರದ ಮುದೇನೂರು ಗ್ರಾಮ ಪಂಚಾಯ್ತಿ ಕಚೇರಿ ಜಲಾವೃತಗೊಳ್ಳುವ ಹಂತಕ್ಕೆ ತಲುಪಿದೆ. ನಾಗೇನಹಳ್ಳಿ, ಮಾಕನೂರು, ಕವಲೆತ್ತು, ನಲವಾಗಲ, ನದಿಹರಳಹಳ್ಳಿ, ಐರಣಿ, ಹಿರೇಬಿದರಿ ಗ್ರಾಮದ ಕೆಲ ರೈತರ ಜಮೀನುಗಳಿಗೆ ನೀರು ನುಗ್ಗಿದೆ.

ಸ್ವಯಂಕೃತ ಅಪರಾಧ?: ‘ಮುದೇನೂರು ರಸ್ತೆ ಪಕ್ಕದಲ್ಲಿರುವ ಮಾಕನೂರು ಗ್ರಾಮದ ಬಹುಪಾಲು ರೈತರ ಜಮೀನು ಮುಳುಗಡೆಯಾಗಿದೆ. ತರಕಾರಿ, ಕಬ್ಬು ಸೇರಿದಂತೆ ತೆಂಗು, ಅಡಿಕೆ ಜಲಾವೃತಗೊಂಡಿದೆ. ಹಣದ ಆಸೆಗೆ ಬಿದ್ದ ರೈತರು ಇಟ್ಟಿಗೆ ಭಟ್ಟಿ ಮಾಲೀಕರಿಗೆ ಮಣ್ಣು ಮಾರಿಕೊಂಡು ಜಮೀನಿನ ಎತ್ತರ ತಗ್ಗುವಂತೆ ಮಾಡಿಕೊಳ್ಳಲಾಗಿದೆ. ಇದು ರೈತರ ಸ್ವಯಂಕೃತ ಅಪರಾಧ’ ಎಂದು ರೈತ ಮುಖಂಡ ಈರಣ್ಣ ಹಲಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ರೈತರು ಮಣ್ಣು ಮಾರುತ್ತಿದ್ದರೂಗಣಿ ಮತ್ತು ಭೂವಿಜ್ಞಾನ ಇಲಾಖೆ ಕಡಿವಾಣ ಹಾಕುತ್ತಿಲ್ಲ. ರೈತರ ಸಂಕಷ್ಟ ಆಲಿಸುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ.ಪ್ರತಿವರ್ಷ ಈ ಭಾಗದ ರೈತರು ಪ್ರವಾಹದ ಭೀತಿ ಎದುರಿಸುವಂತಾಗಿದೆ’ ಎಂದರು.

ಜನರು ಸೇರಿದಂತೆ ಜಾನುವಾರುಗಳನ್ನು ನದಿ ಸಮೀಪದ ಬಿಡದಂತೆ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಈಗಾಗಲೇ ಡಂಗೂರ ಸಾರಲಾಗಿದೆ.

ಕೊಡಿಯಾಲ ಮತ್ತು ಹರಿಹರ ನಗರಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಮತ್ತು ಹೊಸ ಸೇತುವೆ ಮೇಲೆ ನಿಂತು ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ವೀಕ್ಷಿಸಿದರೆ ಇನ್ನು ಕೆಲವರು ಕುಟುಂಬ ಸಮೇತರಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.