ಬ್ಯಾಡಗಿ: ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಕಾರಣಕ್ಕೆ ಬ್ಯಾಡಗಿ ಪಟ್ಟಣದಲ್ಲಿ ಆಗಾಗ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕದರಮಂಡಲ–ಹೂಲಿಹಳ್ಳಿ ಗ್ರಾಮಗಳಿಗೆ ತುಂಗಭದ್ರಾ ನದಿ ತೀರದ ಜಾಕ್ವೆಲ್ನಿಂದ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಆದರೆ, ಕದರಮಂಡಲಗಿ ಗ್ರಾಮ ಪಂಚಾಯಿತಿ ಅಗತ್ಯಕ್ಕಿಂತ ಹೆಚ್ಚು ನೀರು ಬಳಸುತ್ತಿರುವುದರಿಂದ ಬ್ಯಾಡಗಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಆರೋಪವಿದೆ.
ಮೂರು ದಿನಕ್ಕೊಮ್ಮೆ ಬಿಡುತ್ತಿದ್ದ ನದಿ ನೀರು ಈಗ ಐದಾರು ದಿನಕ್ಕೊಮ್ಮೆ ಬಿಡುವಂತಾಗಿದೆ. ಅಲ್ಲದೆ ನಿರಂತರ ನೀಡಿ ಮೀಟರ್ ನಗಳಲ್ಲಿ ಪರೀಕ್ಷೆ ಮಾಡಲು ನೀರಿನ ಕೊರತೆ ಕಾಡುತ್ತಿದೆ. ಹೀಗಾಗಿ, ನಿರಂತರ ನೀರು ಅನುಷ್ಠಾನ ವಿಳಂಬವಾಗುತ್ತಿದೆ. ಪಟ್ಟಣದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜನರು ದೂರಿದರು.
ಪಟ್ಟಣದ ಅಗಸನಹಳ್ಳಿಗೆ ಮಾತ್ರ ನಿರಂತರ ನೀರು ನಳದಲ್ಲಿ ನೀರು ಸರಬರಾಜು ಆಗುತ್ತಿದೆ. ಉಳಿದಂತೆ ವಿದ್ಯಾನಗರ, ಬಸವೇಶ್ವರ ನಗರ, ಹೊಂಡದ ಓಣಿ, ನೆಹರೂ ನಗರ, ಚೌಡೇಶ್ವರಿ ನಗರ, ವಿನಾಯಕ ನಗರ, ವಾಲ್ಮೀಕಿ ನಗರ ಮುಂತಾದೆಡೆ ನೀರಿನ ಕೊರೆತೆಯಾಗುತ್ತಿದೆ ಎಂದು ಅಲ್ಲಿಯ ನಿವಾಸಿಗಳು ದೂರುತ್ತಾರೆ.
ಕಳೆದ ಎರಡು ವರ್ಷಗಳ ಹಿಂದೆ ಅನುಷ್ಠಾನವಾಗಬೇಕಾಗಿದ್ದ ನಿರಂತರ ನೀರು ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಕಳಪೆ ಕಾಮಗಾರಿ ಕಾರಣವಾಗಿದೆ.
ತುರಾತುರಿಯಲ್ಲಿ ಮಾಡಿದ ಕಾಮಗಾರಿಯಿಂದ ನೀರು ಸರಿಯಾಗಿ ಹರಿಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಪಟ್ಟಣದ ಆನಂದೇಶ್ವರ ದೇವಸ್ಥಾನದ ಹಿಂದಿನ ಸಿಸ್ಟರ್ನ್ ಟ್ಯಾಂಕ್ ಸೇರಿದಂತೆ ಹಲವಾರು ಸಿಸ್ಟರ್ನ್ ಟ್ಯಾಂಕ್ಗಳಿಗೆ ಕೂರಿಸಿದ ನಳದಲ್ಲಿ ನೀರು ಸೋರುತ್ತಿದೆ.
ಇದರಿಂದಾಗಿ ಅನಗತ್ಯವಾಗಿ ನೀರು ಹರಿದು ಹೋಗುತ್ತಿದ್ದು, ಪುರಸಭೆ ನೀರು ಸರಬರಾಜು ಸಿಬ್ಬಂದಿಯ ಬೇಜವಾಬ್ದಾರಿ ಕಾರಣವಾಗಿದೆ. ಈ ಕುರಿತು ಹಲವು ಬಾರಿ ಮುಖ್ಯಾಧಿಕಾರಿಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ ಆರೋಪಿಸಿದರು.
ನಿರಂತರ ನೀರು ನಳದಲ್ಲಿ ನೀರು ಬಾರದಿದ್ದರೂ ಜನರಿಗೆ ನೀರಿನ ಬಿಲ್ ನೀಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅದಕ್ಕೆ ಸಂಬಂಧಿಸಿದ ಎಂಜಿನಿಯರ್ ಕೇಳಿ ಎನ್ನುವ ಸಿದ್ಧ ಉತ್ತರ ಬರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಬಸನಕಟ್ಟಿ ಕೆರೆಗೆ ₹ 1 ಕೋಟಿ ವೆಚ್ಚದಲ್ಲಿ ಸುತ್ತಲೂ ತಡೆಗೋಡೆ ನಿರ್ಮಿಸಿದ್ದರೂ ಯಾವುದಕ್ಕೂ ಪ್ರಯೋಜನವಾಗಿಲ್ಲ. ಕೂಡಲೇ ಅದನ್ನು ಅಭಿವೃದ್ಧಿಪಡಿಸಿ ನೀರು ಸಂಗ್ರಹಿಸಬೇಕೆಂದು ಅವರು ಒತ್ತಾಯಿಸಿದರು.
ನದಿ ನೀರಿನಿಂದ ತುಂಬಿಸಿದ್ದ ಕೆರೆಗಳು ಖಾಲಿಯಾಗುವ ಹಂತಕ್ಕೆ ಬಂದಿದೆ. ಇಂಥ ಕೆರೆಗಳನ್ನು ಹೂಳು ತೆಗೆಸಿ ಹೆಚ್ಚು ನೀರು ಸಂಗ್ರಹಿಸುವಂತೆ ಮಾಡಬೇಕುಕಿರಣ ಗಡಿಗೋಳ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.