ADVERTISEMENT

ಬಳಕೆಯಾಗದ ರಾಣೆಬೆನ್ನೂರು ಮೆಗಾ ಮಾರುಕಟ್ಟೆ: ನಿರ್ವಹಣೆ ಕೊರತೆ

ಹುಲಿಹಳ್ಳಿ- ಕೂನಬೇವು ಗ್ರಾಮದ ಬಳಿ ನಿರ್ಮಾಣ: ವ್ಯಾಪಾರಕ್ಕೆ 522 ನಿವೇಶನ

ಮುಕ್ತೇಶ ಕೂರಗುಂದಮಠ
Published 7 ಜನವರಿ 2025, 5:59 IST
Last Updated 7 ಜನವರಿ 2025, 5:59 IST
ರಾಣೆಬೆನ್ನೂರು ತಾಲ್ಲೂಕಿನ ಹುಲಿಹಳ್ಳಿ- ಕೂನಬೇವು ಗ್ರಾಮದ ಬಳಿ ನಿರ್ಮಿಸಿರುವ ಮೆಗಾ ಮಾರುಕಟ್ಟೆ ಪ್ರವೇಶ ದ್ವಾರ
ರಾಣೆಬೆನ್ನೂರು ತಾಲ್ಲೂಕಿನ ಹುಲಿಹಳ್ಳಿ- ಕೂನಬೇವು ಗ್ರಾಮದ ಬಳಿ ನಿರ್ಮಿಸಿರುವ ಮೆಗಾ ಮಾರುಕಟ್ಟೆ ಪ್ರವೇಶ ದ್ವಾರ   

ರಾಣೆಬೆನ್ನೂರು: ತಾಲ್ಲೂಕಿನ ಹೂಲಿಹಳ್ಳಿ- ಕೂನಬೇವು ಗ್ರಾಮದ ಬಳಿ ನಿರ್ಮಿಸಿರುವ ಮೆಗಾ ಮಾರುಕಟ್ಟೆ ಹಲವು ವರ್ಷಗಳಿಂದ ಬಳಕೆಯಾಗದೇ ಪಾಳು ಬಿದ್ದಿದ್ದು, 522 ನಿವೇಶನಗಳಲ್ಲಿ ಕಸ ಬೆಳೆದಿದೆ. ₹ 129 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಮಾರುಕಟ್ಟೆ, ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ.

ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಉಂಟಾಗುತ್ತಿದ್ದ ದಟ್ಟಣೆ ಹಾಗೂ ಸುಸಜ್ಜಿತ ಮಾರುಕಟ್ಟೆಯ ಅಗತ್ಯತೆಯನ್ನು ಪೂರೈಸುವ ಉದ್ದೇಶದಿಂದ ಮೆಗಾ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿಯೇ ಬೃಹತ್‌ ಪ್ರಮಾಣದ ಮಾರುಕಟ್ಟೆ ಇದಾಗಿದೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಬರುವ ರೈತರಿಗೆ ಒಂದೇ ಸೂರಿನಡಿ ವ್ಯಾಪಾರ–ವಹಿವಾಟು ಮಾಡಲು ಅನುಕೂಲವಾಗಲೆಂದು ಮಾರುಕಟ್ಟೆ ನಿರ್ಮಿಸಲಾಗಿದೆ.

222 ಎಕರೆ ಜಾಗದಲ್ಲಿ 2019ರಲ್ಲಿ ಆರಂಭವಾಗಿದ್ದ ಮೆಗಾ ಮಾರುಕಟ್ಟೆ ನಿರ್ಮಾಣ ಕಾಮಗಾರಿ, 2022ರಲ್ಲಿ ಮುಕ್ತಾಯಗೊಂಡಿದೆ. ಇದಾಗಿ ಎರಡು ವರ್ಷವಾದರೂ ಮಾರುಕಟ್ಟೆಯು ಎಪಿಎಂಸಿಗೆ ಹಸ್ತಾಂತರವಾಗಿಲ್ಲ. 2025ರ ಏಪ್ರಿಲ್ ಅಂತ್ಯದವರೆಗೂ ಹಸ್ತಾಂತರಕ್ಕೆ ಸಮಯ ಇರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮಾರುಕಟ್ಟೆ ಪ್ರದೇಶ ಕ್ರಮೇಣ ಹಾಳಾಗುತ್ತಿದೆ.

ADVERTISEMENT

ರಾಣೆಬೆನ್ನೂರಿನಲ್ಲಿ ಗೋವಿನ ಜೋಳ, ಶೇಂಗಾ, ಹತ್ತಿ, ಸೂರ್ಯಕಾಂತಿ, ಜೋಳ, ಈರುಳ್ಳಿ ಹಾಗೂ ಬೆಳ್ಳುಳ್ಳಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದೇ ವ್ಯಾಪಾರವನ್ನು ಮೆಗಾ ಮಾರುಕಟ್ಟೆಗೆ ಹಸ್ತಾಂತರಿಸುವ ಉದ್ದೇಶ ಸರ್ಕಾರದ್ದಾಗಿದೆ. ಆದರೆ, ಮೆಗಾ ಮಾರುಕಟ್ಟೆ ಇದುವರೆಗೂ ಹಸ್ತಾಂತರವಾಗಿಲ್ಲ.

ಮೆಗಾ ಮಾರುಕಟ್ಟೆಯ ಮುಖ್ಯ ರಸ್ತೆಯ ಎರಡೂ ಕಡೆ, ಉದ್ಯಾನ ಹಾಗೂ ಆಡಳಿತ ಕಟ್ಟಡಗಳ ಬಳಿ ಪೊದೆ ಬೆಳೆದಿದೆ. ಮರಗಳು ನೀರಿಲ್ಲದೇ ಒಣಗುತ್ತಿವೆ. ಅತಿಥಿ ಗೃಹದ ಕಟ್ಟಡದ ಕಿಟಕಿ ಗಾಜು ಒಡೆದಿದೆ. ನೀರಿನ ಪೈಪ್‌ಗಳು ಮುರಿದು ಬಿದ್ದಿವೆ.

ಕಟ್ಟಡದೊಳಗೆ ನುಗ್ಗಿದ್ದ ಕೆಲ ಮಂಗಗಳು, ಅಲ್ಲಿಯೇ ಸಿಲುಕಿ ಮೃತಪಟ್ಟಿವೆ. ದುರ್ವಾಸನೆ ಗ್ರಹಿಸಿದ್ದ ಸ್ಥಳೀಯರು, ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ನಂತರ, ಕಟ್ಟಡದೊಳಗೆ ಸ್ವಚ್ಛತೆ ಮಾಡಲಾಗಿದೆ.

ಮಾರುಕಟ್ಟೆಯ ಎಲ್ಲ ಕಟ್ಟಡಗಳಲ್ಲಿ ಪಾರಿವಾಳಗಳು ಬೀಡು ಬಿಟ್ಟಿವೆ. ಕಸದ ರಾಶಿಯೇ ಹೆಚ್ಚಾಗಿದೆ. ಬಣ್ಣವೂ ಮಾಸಿದೆ.  ತೂಕದ ಯಂತ್ರಗಳು ತುಕ್ಕು ಹಿಡಿದಿವೆ. ಶುದ್ದ ಕುಡಿಯುವ ನೀರಿನ ಘಟಕಗಳ ಉಪಕರಣಗಳು ಹಾಳಾಗಿವೆ. ಎಲ್ಲೆಂದರಲ್ಲಿ ಹುಲ್ಲು ಬೆಳೆದು ಮಾರುಕಟ್ಟೆ ಗುರುತು ಸಿಗದಂತಾಗಿದೆ.

ಮಾರುಕಟ್ಟೆಯಲ್ಲಿ ಕಾಂಕ್ರೀಟ್‌ ರಸ್ತೆ, ಚರಂಡಿ, ಹರಾಜು ಕಟ್ಟೆ, ಟೆಂಡರ್‌ ಕೊಠಡಿ, ರೈತ ಭವನ, ಮಳಿಗೆಗಳು, ಮಾಹಿತಿ ಕೇಂದ್ರ, ಶ್ರಮಿಕ ಭವನ, ಅತಿಥಿ ಗೃಹ, ಉಪಹಾರ ಗೃಹ, ಪ್ರಯೋಗಾಲಯ, ಕೃಷಿ ಉತ್ಪನ್ನ ಒಣಗಿಸುವ ಕಟ್ಟೆ, ಶೌಚಾಲಯ ನಿರ್ಮಿಸಲಾಗಿದೆ. ಮಾರುಕಟ್ಟೆ ಒಳಗಡೆ ಎರಡೂ ದೊಡ್ಡ ಕಲ್ಲಿನ ಕ್ವಾರಿಗಳಿವೆ. ಅಲ್ಲಿ ನೀರು ನಿಂತುಕೊಂಡಿದೆ.

ಮಾರುಕಟ್ಟೆ ಪಾಳು ಬಿದ್ದಿದ್ದರಿಂದ, ಅಕ್ರಮ ಚಟುವಟಿಕೆ ತಾಣವಾಗಿಯೂ ಮಾರ್ಪಟ್ಟಿದೆ. ಕೆಲವರು ಮಾರುಕಟ್ಟೆಯೊಳಗೆ ನುಗ್ಗಿ ಮದ್ಯದ ಪಾರ್ಟಿ ಮಾಡುತ್ತಿದ್ದಾರೆ. ಕಟ್ಟಡಗಳ ಕಿಟಕಿ ಗಾಜು ಒಡೆದು ಹಾಳು ಮಾಡುತ್ತಿದ್ದಾರೆ.

‘ಮೆಗಾ ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಾರುಕಟ್ಟೆಯಲ್ಲಿರುವ ಎಲ್ಲ ನಿವೇಶನಗಳನ್ನು ತ್ವರಿತವಾಗಿ ಹಂಚಿಕೆ ಮಾಡಬೇಕು. ಕೃಷಿ ಉತ್ಪನ್ನಗಳ ವಹಿವಾಟು ಆರಂಭವಾದರೆ, ರೈತರಿಗೆ ಅನುಕೂಲವಾಗಲಿದೆ’ ಎಂದು ರೈತ ಕರಬಸಪ್ಪ ಹೇಳಿದರು.

ಮಾರುಕಟ್ಟೆಯ ಒಳಭಾಗದಲ್ಲಿ ಹುಲ್ಲು ಬೆಳೆದಿರುವುದು

ಮೆಗಾ ಮಾರುಕಟ್ಟೆಯನ್ನು ಗುತ್ತಿಗೆದಾರರು ನಮಗೆ ಹಸ್ತಾಂತರಿಸಿಲ್ಲ. ನ್ಯೂನತೆ ಸರಿಪಡಿಸಿದ ಬಳಿಕವೇ ಹಸ್ತಾಂತರ ಪಡೆಯಲಾಗುವುದು.

–ಶೈಲಜಾ ಎಂ.ವಿ. ಎಪಿಎಂಸಿ ಕಾರ್ಯದರ್ಶಿ

ಮೆಗಾ ಮಾರುಕಟ್ಟೆಯ 300 ನಿವೇಶನಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು ರಾಜ್ಯದ ಹೊರ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ವರ್ತಕರು ಅರ್ಜಿ ಸಲ್ಲಿಸಿದ್ದಾರೆ

–ಪರಮೇಶ್ವರ ನಾಯಕ ಸಹಾಯಕ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.