ಶಿಗ್ಗಾವಿ: ತಾಲ್ಲೂಕು ಪಂಚಾಯ್ತಿ ನೂತನ ಉಪಾಧ್ಯಕ್ಷೆಯಾಗಿ ಹಿರೇಬೆಂಡಿಗೇರಿ ಕ್ಷೇತ್ರದ ವಿಜಯಲಕ್ಷ್ಮೀ ಶಂಕರಣ್ಣ ಮುಂದಿನಮನಿ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪದ್ಮಾವತಿ ಪಾಟೀಲ ಅವರ ರಾಜೀನಾಮೆಯಿಂದ ತೆರುವಾದ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕ್ಕಮ್ಮನವರ, ಸಹಾಯಕರಾಗಿ ತಾಲ್ಲೂಕು ಪಂಚಾಯ್ತಿ ಇಒ ಪ್ರಶಾಂತ ತುರಕಾಣಿ ಕಾರ್ಯನಿರ್ವಹಿಸಿದರು.
ತಾಲ್ಲೂಕು ಪಂಚಾಯ್ತಿ 6 ಬಿಜೆಪಿ, 5 ಕಾಂಗ್ರೆಸ್, 3 ಪಕ್ಷೇತರರು ಸೇರಿ ಒಟ್ಟು 14 ಜನ ಸದಸ್ಯ ಬಲ ಹೊಂದಿದೆ. ಸಾಮಾನ್ಯ ಮಹಿಳಾ ಮೀಸಲಾತಿ ಹೊಂದಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹಿರೇಬೆಂಡಿಗೇರಿ ಕ್ಷೇತ್ರದ ವಿಜಯಲಕ್ಷ್ಮೀ ಒಬ್ಬರೇ ನಾಮಪತ್ರ ಸಲ್ಲಿದ ಕಾರಣ ಅವಿರೋಧ ಆಯ್ಕೆ ಎಂದು ಚುನಾವಣಾ ಅಧಿಕಾರಿ ಘೋಷಣೆ ಮಾಡಿದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ವಿಜಯಲಕ್ಷ್ಮೀ, ತಾಲ್ಲೂಕಿನ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ವ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಜನರ ಆಶೋತ್ತರ ಈಡೇರಿಸುವ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ಕಾರ್ಯ ನಿರ್ವಸುತ್ತೇನೆ. ನನ್ನಗೆ ಸಿಕ್ಕಿರುವ ಅಧಿಕಾರವನ್ನು ಕ್ಷೇತ್ರ ಅಭಿವೃದ್ಧಿಗಾಗಿ ಮೀಸಲಿಡುತ್ತೇನೆ ಎಂದರು.
ಎಪಿಎಂಸಿ ಅಧ್ಯಕ್ಷ ಹರ್ಜಪ್ಪ ಲಮಾಣಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಿ.ಎಸ್.ಹಿರೇಮಠ, ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಪದ್ಮಾವತಿ ಪಾಟೀಲ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಶ್ರೀಕಾಂತ ಬುಳ್ಳಕ್ಕನವರ ಉಮೇಶ ಅಂಗಡಿ, ದೇವಣ್ಣ ಚಾಕಲಬ್ಬಿ, ಎಸ್.ಕೆ.ಅಕ್ಕಿ, ಶಂಭಣ್ಣ ಕಡಕೋಳ, ಕೆಎಂಎಫ್ ನಿರ್ದೇಶಕ ಬಸನಗೌಡ ಮೇಗಳಮನಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.