ADVERTISEMENT

ಹಿರೇಕೆರೂರ | ಕಸ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಶಾಶ್ವತ ಪರಿಹಾರಕ್ಕೆ ಜನರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:53 IST
Last Updated 14 ಅಕ್ಟೋಬರ್ 2025, 2:53 IST
ಹಿರೇಕೆರೂರ ಪಟ್ಟಣದ ಪ್ರವಾಸಿ ಮಂದಿರ ಬಳಿ ಕಸದ ರಾಶಿ 
ಹಿರೇಕೆರೂರ ಪಟ್ಟಣದ ಪ್ರವಾಸಿ ಮಂದಿರ ಬಳಿ ಕಸದ ರಾಶಿ    

ಹಿರೇಕೆರೂರ: ಪಟ್ಟಣದ ಹಲವು ಕಡೆಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಕಸ ನಿರ್ವಹಣೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದರ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ನಗರದಲ್ಲಿ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ಹಾಕಲು ತೊಟ್ಟಿಗಳಿಲ್ಲ. ಹೀಗಾಗಿ, ಜನರು ಸಹ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿದ್ದಾರೆ.

ಮನೆಯಿಂದ ಕಸ ಸಂಗ್ರಹಿಸಲು ಸರ್ಕಾರ ವಾಹನ ನೀಡಿದೆ. ಆದರೆ, ವಾಹನಗಳು ಸರಿಯಾದ ಸಮಯಕ್ಕೆ ಹಾಗೂ ನಿಗದಿತ ದಿನದಂದು ಮನೆಗಳಿಗೆ ಬರುವುದಿಲ್ಲ. ಕಸ ಸಂಗ್ರಹಕ್ಕೆ ವೇಳಾಪಟ್ಟಿಯೇ ಇಲ್ಲದಂತಾಗಿದೆ. ಕೆಲ ಬಡಾವಣೆಗೆ ವಾಹನಗಳೇ ಬರುವುದಿಲ್ಲ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ರೂಢಿಸಿಕೊಂಡಿದ್ದಾರೆ.

ADVERTISEMENT

ಕಸ ನಿರ್ವಹಣೆಗೂ ತಮಗೂ ಸಂಬಂಧವಿಲ್ಲದಂತೆ ಪಟ್ಟಣ ಪಂಚಾಯತ ಸಿಬ್ಬಂದಿ ವರ್ತಿಸುತ್ತಿದ್ದಾರೆ. ಕಸ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬುದು ಜನರು ಒತ್ತಾಯಿಸುತ್ತಿದ್ದಾರೆ.

‘ನಗರದಲ್ಲಿ ಎಲ್ಲಿ ನೋಡಿದರೂ ಕಸ, ದುರ್ವಾಸನೆ, ಮಲೀನಗೊಂಡ ಪರಿಸರ ಕಾಣುತ್ತಿದೆ. ಇದನ್ನು ಸರಿಪಡಿಸಿ ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕು’ ಎಂದು ಸ್ಥಳೀಯರು ಕೋರುತ್ತಿದ್ದಾರೆ.

ಪಟ್ಟಣದ ಚರ್ಚ್ ಹತ್ತಿರ, ಬಸವೇಶ್ವರ ನಗರ , ಪ್ರವಾಸಿ ಮಂದಿರ ಹೀಗೆ ಕೆಲ ಮುಖ್ಯ ರಸ್ತೆಗಳ ಪಕ್ಕದಲ್ಲಿ ಕಸ ಸಂಗ್ರಹವಾಗುತ್ತಿದೆ. ಅದೇ ಸ್ಥಳ, ಹಂದಿಗಳ ತಾಣವಾಗಿ ಮಾರ್ಪಡುತ್ತಿದೆ. ಬಿಡಾಡಿ ದನಗಳು, ಬೀದಿ ನಾಯಿಗಳು , ಹಂದಿಗಳು ಕಸದ ರಾಶಿಯನ್ನು ರಸ್ತೆಯ ತುಂಬೆಲ್ಲ ಚಿಲ್ಲಾಪಿಲ್ಲಿ ಮಾಡುತ್ತಿವೆ. ಕಸವು  ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಉಂಟಾಗಿದೆ.  

ಕಸದ ವಾಹನಗಳು ಕೆಲ ವಾರ್ಡ್‌ಗಳಲ್ಲಿ ಬೆಳಿಗ್ಗೆ ಬರುತ್ತವೆ. ಕೆಲವೆಡೆ ಮಧ್ಯಾಹ್ನ ಬರುತ್ತವೆ. ಕೆಲಸಕ್ಕೆ ಹೋಗುವವರು ಮಧ್ಯಾಹ್ನ ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ವಾಹನಕ್ಕೆ ಕಸ ಹಾಕಲು ಸಾಧ್ಯವಾಗುತ್ತಿಲ್ಲ. ಪ್ರತಿ ವಾರ್ಡ್‌ಗೂ ಪ್ರತ್ಯೇಕ ವಾಹನ ಮತ್ತು ನಿರ್ದಿಷ್ಟ ಸಮಯ ನಿಗದಿ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಕಸ ವಿಲೇಮಾರಿ ಮಾಡುವಲ್ಲಿ ವಿಳಂಬ ಆಗುತ್ತಿರುವ ಕಾರಣ ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿಯೂ ಕಸ ಸಂಗ್ರಹಗೊಳ್ಳುತ್ತಿದೆ. ಕಸ ವಿಲೇವಾರಿಯಾಗದೇ ಎಲ್ಲೆಂದರಲ್ಲಿ ರಾಶಿ ರಾಶಿಯಾಗಿ ಕಣ್ಣಿಗೆ ಕಾಣುತ್ತಿದೆ. 

ಹಿರೇಕೆರೂರ ಪಟ್ಟಣದ ಮುಖ್ಯ ರಸ್ತೆಯ ಚರ್ಚ್ ಮುಂದಿನ ಕಸದ ರಾಶಿ 

ಕಸ ನಿರ್ವಹಣೆ: ಜನಪ್ರತಿನಿಧಿಗಳು ಮೌನ

‘ಹಿರೇಕೆರೂರು ಪಟ್ಟಣದಲ್ಲಿ ಕಸ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಜನರಿಂದ ಆರಿಸಿದ ಜನಪ್ರತಿನಿಧಿಗಳು ಕಸ ಸಮಸ್ಯೆಗೆ ಸ್ಪಂದಿಸದೇ ಮೌನವಾಗಿದ್ದಾರೆ’ ಎಂದು ಜನರು ದೂರಿದರು. ‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಸದ ನಿರ್ವಹಣೆ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ ಹಿರೇಕೆರೂರು ಪಟ್ಟಣವನ್ನು ಮಾದರಿ ಪಟ್ಟಣವಾಗಿ ರೂಪಿಸಬೇಕು’ ಎಂದು ಒತ್ತಾಯಿಸಿದರು.