ಹಾವೇರಿ: ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ, ಭಾರತದ ಏಕತೆಯನ್ನು ಒಡೆಯುತ್ತಿರುವ ‘ಹಿಂದಿ ದಿವಸ’ ಆಚರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಒಗ್ಗೂಡಿದ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
ಪ್ರತಿ ವರ್ಷ ಸೆ.14ರಂದು ನಮ್ಮ ತೆರಿಗೆ ಹಣದಿಂದ ‘ಹಿಂದಿ ದಿವಸ್’ ಆಚರಣೆ ನಡೆಸುತ್ತಾ ಬರಲಾಗುತ್ತಿದೆ. ದೇಶದ ಇತರ ಭಾಷೆಗಳನ್ನು ಕಡೆಗಣಿಸಿ, ಹಿಂದಿಯೊಂದನ್ನೇ ಪ್ರತಿ ವರ್ಷ ಆಚರಿಸುತ್ತಿರುವುದು ವಿರೋಧಿಸುತ್ತೇವೆ. 1950ರಲ್ಲಿ ಜಾರಿಗೊಳಿಸಲಾದ ಸಂವಿಧಾನದ ವಿಧಿಗಳಲ್ಲಿ ಭಾರತದ ಭಾಷಾ ನೀತಿಯನ್ನು ಬರೆಯಲಾಗಿದೆ. ಭಾರತ ಸರ್ಕಾರವು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತದ ಭಾಷೆಗಳನ್ನಾಗಿ ಮಾಡಿಕೊಂಡಿರುವುದರಿಂದ ಇತರ ಭಾಷಿಕರಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.
ಇತರ ಭಾಷಿಕರಿಗೆ ಕಲಿಕೆ, ಪ್ರವೇಶ ಪರೀಕ್ಷೆ, ಉದ್ಯೋಗ, ನೇಮಕಾತಿ, ಸಾರ್ವಜನಿಕ ಸೇವೆಗಳಲ್ಲಿ ತುಂಬಾ ಅನಾನುಕೂಲವಾಗುತ್ತಿದೆ. ಬ್ಯಾಂಕು ಹಾಗೂ ಒಕ್ಕೂಟ ಸರ್ಕಾರದ ಇಲಾಖೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ತಾರತಮ್ಯ ನೀತಿಯಿಂದ ಅನ್ಯಾಯವಾಗುತ್ತಿದೆ. ಹಿಂದಿಯೇತರ ಜನಗಳ ಮೇಲೆ ಹಿಂದಿ ಹೇರುತ್ತಿರುವ ಕ್ರಮವನ್ನು ಖಂಡಿಸುತ್ತೇವೆ. ಭಾರತಕ್ಕೆ ಯಾವುದೇ ರಾಷ್ಟ್ರಭಾಷೆ ಇರುವುದಿಲ್ಲ. ಎಲ್ಲ 22 ಭಾಷೆಗಳು ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ, ರಾಜ್ಯ ಕಾರ್ಯದರ್ಶಿ ಕರಿಬಸಯ್ಯ ಎಸ್.ಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶಗೌಡ ಮುದಿಗೌಡ್ರ, ವಿಜಯಲಕ್ಷ್ಮಿ ಗುಡಮಿ, ಬಿ.ಎಚ್. ಬಣಕಾರ, ಪರಮೇಶಪ್ಪ ಕಾಟೇಕರ, ಹಸನಸಾಬ ಹತ್ತಿಮತ್ತೂರ, ಫಕ್ಕೀರಯ್ಯ ಓದಿಸೋಮಠ, ನಾಗರಾಜ ದೇಸಾಯಿ, ಉಮೇಶ, ಸತ್ತ್ಯವತಿ ಕಡವಿ, ಹಾಲೇಶ ಹಾಲಣ್ಣನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.