ಹಾವೇರಿ: ‘ಕಲಾವಿದ ಯಾವಾಗಲೂ ಸ್ವಾಭಿಮಾನಿ ಮತ್ತು ಸ್ವಾವಲಂಬಿಯಾಗಿ ತನ್ನ ವ್ಯಕ್ತಿತ್ವವನ್ನು ಕಾಪಾಡಿಕೊಂಡಿರಬೇಕು. ವಿಶ್ವ ಕಲಾ ದಿನಾಚರಣೆ ಎಂದರೆ ಅದು ಕಲಾವಿದರ ದಿನ, ತನ್ನ ಕಲಾ ಸಾಧನೆಯನ್ನು ಅವಲೋಕಿಸುತ್ತಲೇ ಹೊಸ ಹೆಜ್ಜೆಗಳನ್ನು ಗುರುತಿಸುವ ದಿನವಾಗಿದೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ‘ವಿಶ್ವ ಕಲಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಕಲಾವಿದ ಬಿ. ಮಾರುತಿ ಮಾತನಾಡಿ, ‘ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗಲು ಬಯಸುತ್ತಾರೆ. ಆದರೆ ಕಲಾವಿದನಾಗುವೆ ಎಂದು ಯಾರೂ ಹೇಳುವುದಿಲ್ಲ. ಮನಸ್ಸಿನ ಶಾಂತಿಗಿಂತ, ದುಡ್ಡೇ ಇಂದು ಪ್ರಮುಖವಾಗಿದೆ. ನಿಜವಾದ ಸಂತೃಪ್ತಿ ಇರುವುದು ಕಲೆಯಲ್ಲಿ’ ಎಂದು ಹೇಳಿದರು.
ಅಕಾಡೆಮಿ ಸದಸ್ಯ ಗಣೇಶ ಧಾರೇಶ್ವರ ವಿಶೇಷ ಉಪನ್ಯಾಸ ನೀಡಿದರು.ಸ್ಥಳದಲ್ಲಿಯೇ ಚಿತ್ರ ರಚನೆ ಪ್ರಾತ್ಯಕ್ಷಿಕೆ ನಡೆಯಿತು. ಸದಾಶಿವ ಸ್ವಾಮೀಜಿ ಅವರ ಚಿತ್ರವನ್ನು ಕಲಾವಿದ ಗಣೇಶ ಧಾರೇಶ್ವರ ಅವರು ಸುಮಾರು ಮುಕ್ಕಾಲು ಗಂಟೆ ಸಮಯದಲ್ಲಿ ಬರೆದು ನೆರೆದ ಕಲಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.
ಆರ್ಟಗ್ಯಾಲರಿಯ ಮುಖ್ಯಸ್ಥ ಕರಿಯಪ್ಪ ಹಂಚಿನಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಯಾಗಿ ‘ಉತ್ಸವ ರಾಕ್ ಗಾರ್ಡನ್’ ಮಾಲೀಕರಾದ ವೇದರಾಣಿ ದಾಸನೂರ ಆಗಮಿಸಿದ್ದರು.
ಹಿರಿಯ ಲೇಖಕ ಸತೀಶ ಕುಲಕರ್ಣಿ,ಸರ್ವಶ್ರೀ ಚಂದ್ರಶೇಖರ ಶಿಶುನಳ್ಳಿ, ಸಿ.ಎ. ಕೂಡಲಮಠ, ಎಸ್.ಆರ್. ಹಿರೇಮಠ, ಆರ್.ಎಫ್. ಕಾಳೆ, ಸಿ.ಎಚ್ ಬಾರ್ಕಿ, ಶಶಿಕಲಾ ಅಕ್ಕಿ, ರಾಜೇಶ್ವರಿ ರವಿ ಸಾರಂಗಮಠ, ಮಕ್ಬುಲ್ ಹಾಲಗಿ, ಕಲಾವಿದರಾದ ಹರೀಶ ಮಾಳಪ್ಪನವರ, ಕುಮಾರ ಕಾಟೇನಹಳ್ಳಿ, ಶಿವರಾಜ, ಸತೀಶ, ಪರಶುರಾಮ ಲಮಾಣಿ, ತಿಮ್ಮನಗೌಡ ಪಾಟೀಲ, ಚಂದ್ರಶೇಖರ ಹೆಬ್ಬಾರ ಪಾಲ್ಗೊಂಡಿದ್ದರು. ರೇಖಾ ಹಂಚಿನಮನಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.