ಕಲಬುರ್ಗಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಿಂದ ಭ್ರಷ್ಟಾಚಾರ ಹಾಗೂ ಗ್ರಾಹಕರಿಗೆ ಮೋಸ ಆಗುವುದನ್ನು ತಡೆಯಬಹುದು ಎಂದು ಆರ್ಥಿಕ ತಜ್ಞ ಪ್ರೊ.ಎಂ.ಬಿ. ಕುಮಾರಸ್ವಾಮಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ಜಿಎಸ್ಟಿ ಕುರಿತು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಸಮಾನ ತೆರಿಗೆಯ ರೂಪವಾಗಿದೆ. ಆರ್ಥಿಕ ಸುಧಾರಣೆ, ಜನರ ಜೀವನಮಟ್ಟ ಸುಧಾರಣೆ ಕಾಣಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳ ಸುಧಾರಣೆಯಿಂದ ದೇಶದ ಹಾಗೂ ರಾಜ್ಯದ ಆರ್ಥಿಕತೆಗೆ ವೇಗ ದೊರಕಲಿದೆ. ಹಲವು ವರ್ಷಗಳಿಂದ ಜಿಎಸ್ಟಿ ಮಸೂದೆಗೆ ಅಂಗೀಕಾರ ದೊರಕಿರಲಿಲ್ಲ. ಇದು ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು ಎಂದು ಅವರು ವಿಶ್ಲೇಷಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಮುಖ ಕೃಷ್ಣಾ ಜೋಷಿ ಮಾತನಾಡಿ, ಸಂಸ್ಕೃತಿ ಉಳಿಸುವ ಹೊಣೆ ದೇಶದ ಯುವಕರ ಮೇಲಿದೆ. ಇದನ್ನು ಸಮರ್ಥವಾಗಿ ಅವರು ನಿಭಾಯಿಸಬೇಕಾಗಿದೆ ಎಂದರು.
ಪ್ರೊ.ಬಸವರಾಜ ಗಾದಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಅಲ್ಲಮಪ್ರಭು ಗಡ್ಡದ, ಮಲ್ಲಿಕಾರ್ಜುನ ಹೂಗಾರ, ಸಂತೋಷ ಮಾಮನಿ ಇದ್ದರು.
ಕಲಬುರ್ಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ 100ಕ್ಕೂ ಹೆಚ್ಚು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೆಂಗಲರಾವ್ ವಂದಿಸಿದರು.