ADVERTISEMENT

ಕಲ್ಯಾಣಮಂಟಪಕ್ಕೆ ನೆರವು: ಸಚಿವ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 7:02 IST
Last Updated 28 ಅಕ್ಟೋಬರ್ 2017, 7:02 IST

ಸೇಡಂ: ‘ವೀರಶೈವ ಲಿಂಗಾಯತ ಸಮಾಜದ ಜನರು ಸಹಬಾಳ್ವೆಯಿಂದ ಕಲ್ಯಾಣಮಂಟಪ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಕಟ್ಟಡ ನಿರ್ಮಾಣಕ್ಕೆ ಶಕ್ತಿ ಮೀರಿ ಸಹಾಯ ನೀಡುವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭವರಸೆ ನೀಡಿದರು.

ಪಟ್ಟಣದ ಚಿಂಚೋಳಿ-ಸೇಡಂ ರಸ್ತೆಯ ಬಿಬ್ಬಳ್ಳಿ ಕ್ರಾಸ್ ಬಳಿ ಶುಕ್ರವಾರ ನಡೆದ ವೀರಶೈವ ಲಿಂಗಾಯತ ನೂತನ ಕಲ್ಯಾಣಮಂಟಪ ನಿರ್ಮಾಣದ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಟ್ಟಣದ ಹೊರವಲಯದಲ್ಲಿ ವಸತಿನಿಲಯ ಮತ್ತು ದೊಡ್ಡ ಪ್ರಮಾಣದ ಕಲ್ಯಾಣ ಮಂಟಪ ನಿರ್ಮಾಣದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇಂತಹ ಮಹಾನ್ ಕಾರ್ಯಕ್ಕೆ ಭೂದಾನ ಮಾಡಿರುವ ಭೂದಾನಿಗಳ ಕಾರ್ಯ ದೊಡ್ಡದಾಗಿದೆ. ನಿಸ್ವಾರ್ಥ ಸೇವೆಯಿಂದ ಮಾಡಿದ ಸಮಾಜಸೇವೆ ಚಿರಕಾಲವಾಗಿರುತ್ತದೆ. ಇಂತಹ ಕೆಲಸಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು’ ಎಂದು ಹೇಳಿದರು.

ADVERTISEMENT

ಖಣದಾಳ ಶ್ರೀಗುರು ವಿದ್ಯಾಪೀಠ ಅಧ್ಯಕ್ಷ ಬಸವರಾಜ ದಿಗ್ಗಾವಿ ಮಾತನಾಡಿ, ‘ನನ್ನ ಮೂಲ ಊರಾದ ಸೇಡಂ ನೆಲ ಜಿಲ್ಲೆಯಲ್ಲಿಯೇ ಅತ್ಯಂತ ಉತ್ತಮ ಹಂತದಲ್ಲಿದ್ದು, ನನ್ನ ಸಂಸ್ಥೆ ಬೆಳೆಯುವುದಕ್ಕೆ ಈ ನೆಲ ಸಹಕಾರ ನೀಡಿದೆ. ಈ ನಾಡಿನ ನೆಲದ ಋಣ ನನ್ನ ಮೇಲಿದ್ದು, ಅದನ್ನು ತೀರಿಸುವ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ವೀರಶೈವ ಕಲ್ಯಾಣಮಂಟಪ ನಿರ್ಮಾ ಣಕ್ಕೆ ರೂ. 1,01,001 ದೇಣಿಗೆಯಾಗಿ ನೀಡುತ್ತೇನೆ. ಅಲ್ಲದೆ, ಕಟ್ಟಡಕ್ಕೆ ಬೇಕಾದ ಸುಮಾರು ರೂ. 10 ಲಕ್ಷ ಮೌಲ್ಯದ ಕಬ್ಬಿಣವನ್ನು ನೀಡುವೆ’ ಎಂದು ವೇದಿಕೆಯಲ್ಲೇ ಘೋಷಿಸಿದರು. ಒಂದು ಲಕ್ಷದ ಚೆಕ್‌ನ್ನು ಸ್ವಾಮೀಜಿಗೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ‘ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣ ಆಗುತ್ತಿರುವುದು ಜಿಲ್ಲೆಯಲ್ಲಿ ಎರಡನೆಯದಾಗಿದೆ. ಇದರ ನಿರ್ಮಾಣಕ್ಕೆ ನಾನು ರೂ. 51 ಸಾವಿರ ನೀಡುವೆ’ ಎಂದು ತಿಳಿಸಿದರು.

ಹಾರಕೂಡ ಸಂಸ್ಥಾನ ಮಠ ಚೆನ್ನವೀರ ಶಿವಾಚಾರ್ಯ, ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯ, ಪಂಚಾಕ್ಷರಿ ಸ್ವಾಮೀಜಿ, ತ್ರಿಮೂರ್ತಿ ಶಿವಾಚಾರ್ಯ, ಮಾತೆ ಜಗದೇವಿ ತಾಯಿ, ರಾಜಕುಮಾರ ಪಾಟೀಲ ತೆಲ್ಕೂರ, ಸುರೇಖಾ ರಾಜಶೇಖರ ಪುರಾಣಿಕ, ಬಸವರಾಜ ಸಜ್ಜನ, ಕಲ್ಯಾಣಪ್ಪ ಪಾಟೀಲ, ಸುವರ್ಣಾ ಎಚ್. ಮಾಲಾಜಿ, ದೇವರಾಯ ನಾಡೆಪಲ್ಲಿ ಇದ್ದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವಿಂದ್ರಪ್ಪ ಬಿರಾದರ, ವೈದ್ಯೆ ಡಾ.ಗೀತಾ ಶ್ರೀನಿವಾಸರೆಡ್ಡಿ ಪಾಟೀಲ, ಸುವರ್ಣಾ ರೇವಣಸಿದ್ದಪ್ಪ, ರೂಪಾ ಗೌನಳ್ಳಿ, ಸಂಗಣ್ಣ ಮಾದೆನೋರ, ಸಿದ್ದಣ್ಣಗೌಡ ಪಾಟೀಲ, ನೀಲಪ್ಪ ತಂಬಾಕ, ಶಂಕರ ಹಾವೇರಿ, ಕರಬಸ್ಸಪ್ಪ, ಶಿವಕುಮಾರ ನಾಗಭೂಷಣ, ರಾಕೇಶ ಚಂದ್ರಶೇಖರ, ಮಲ್ಲಣಗೌಡ ಪಾಟೀಲ, ಭಾಗ್ಯಶ್ರೀ ಕುರಕುಂಟಾ, ಶಿವಕುಮಾರ ಸೋಬಾನ, ಚಂದ್ರಶೇಖರ ಬಿಜನಳ್ಳಿ, ಅವಿನಾಶ ಬೋರಂಚಿ, ಶರಣು ಮಹಾಗಾಂವ ಅವರನ್ನು ಸನ್ಮಾನಿಸಲಾಯಿತು.

ವೀರಶೈವ ಶೈಕ್ಷಣಿಕ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶರಣಪ್ಪ ಪಾಟೀಳ ತೆಲ್ಕೂರ ಸ್ವಾಗತಿಸಿದರು. ಜಗದೀಶ ಕಡಬಗಾಂವ ನಿರೂಪಿಸಿದರು. ಶರಣಬಸ್ಸಪ್ಪ ಹಾಗರಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.