ADVERTISEMENT

ಕೊನೆಯಲ್ಲಿ ಅರಳಿತು ‘ಕಮಲ’

ಹಾವು–ಏಣಿ ಆಟ ನೆನಪಿಸಿದ ಆಳಂದ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 16 ಮೇ 2018, 7:00 IST
Last Updated 16 ಮೇ 2018, 7:00 IST

ಕಲಬುರ್ಗಿ: ಪಕ್ಷ ಕ್ಷಣಕ್ಕೂ ಅಭ್ಯರ್ಥಿಗಳು, ಕಾರ್ಯಕರ್ತರು, ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿದ್ದ ಆಳಂದ ಮತಕ್ಷೇತ್ರದಲ್ಲಿ ಹಲವು ಸುತ್ತಿನ ಮತಗಳ ಏರಿಳಿತದ ಮಧ್ಯೆಯೂ ‘ಕಮಲ’ ಅರಳಿತು.

ಆರಂಭಿಕ ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಷ ಆರ್.ಗುತ್ತೇದಾರ ಮುನ್ನಡೆ ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಪಾಟೀಲ ಅವರು ಹಿನ್ನಡೆ ಅನುಭವಿಸಿದರು.

7ನೇ ಸುತ್ತಿನಿಂದ 19ನೇ ಸುತ್ತಿನವರೆಗೂ ಫಲಿತಾಂಶ ಏರಿಳಿತದಲ್ಲೇ ಸಾಗಿತು. 18ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಸುಭಾಷ ಗುತ್ತೇದಾರ ಅವರು 260 ಮತಗಳ ಅಲ್ಪ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ದುಗುಡ, ಆತಂಕ ಮನೆ ಮಾಡಿತ್ತು.

ADVERTISEMENT

ಗೊಂದಲ ತಂದ ಅಂತರ: 19ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಮತಗಳ ಅಂತರದಲ್ಲಿ ಗೊಂದಲ ಉಂಟಾಯಿತು. ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾ ಚುನಾವಣಾ ಅಧಿಕಾರಿ ಆರ್.ವೆಂಕಟೇಶಕುಮಾರ್ ಅವರು ವಿವಿ ಪ್ಯಾಟ್‌ ಯಂತ್ರದಲ್ಲಿನ ಚೀಟಿಗಳನ್ನು ಎಣಿಕೆ ಮಾಡುವಂತೆ ಸೂಚಿಸಿದರು. ವಿವಿ ಪ್ಯಾಟ್‌ನಲ್ಲಿನ ಮತಗಳು ಹಾಗೂ ಇವಿಎಂನಲ್ಲಿನ ಮತಗಳಿಗೂ ತಾಳೆಯಾಯಿತು. ಅಂತಿಮವಾಗಿ 697 ಮತಗಳ ಅಂತರದಿಂದ
ಸುಭಾಷ ಗುತ್ತೇದಾರ ಗೆಲುವಿನ ನಗೆ ಬೀರಿದರು.

ಸುಭಾಷ ಗುತ್ತೇದಾರ ಅವರು 76,815 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್.ಪಾಟೀಲ ಅವರು 76,118 ಮತಗಳನ್ನು ಪಡೆದು ಪರಾಭವಗೊಂಡರು.

ಬಂದೋಬಸ್ತ್ ಮಧ್ಯೆಯೂ ಪೊಲೀಸರ ಕಣ್ಣು ತಪ್ಪಿಸಿ ಮತ ಎಣಿಕೆ ಕೇಂದ್ರದ ಸುತ್ತ ಜಮಾಯಿಸಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ಫಲಿತಾಂಶ ವೀಕ್ಷಣೆಗೆ ಮುಗಿಬಿದ್ದಿದ್ದರು. ಸ್ನೇಹಿತರು, ಸಂಬಂಧಿಕರಿಗೆ ಮೊಬೈಲ್, ವಾಟ್ಸ್‌ಆ್ಯಪ್ ಮೂಲಕ ಸಂದೇಶವನ್ನು ರವಾನಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.