ಕಲಬುರ್ಗಿ: ‘ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಬದಲಾಗಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ನಿರ್ಣಯವನ್ನು ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡಿಲ್ಲ. ಈ ಬಗ್ಗೆ ಕೆಲವರು ಮಾಧ್ಯಮಗಳಿಗೆ ತಪ್ಪು ಮಾಹಿತಿ ರವಾನಿಸಿದ್ದಾರೆ’ ಎಂದು ಕೌನ್ಸಿಲ್ನ ಕಾರ್ಯಕಾರಿ ಮಂಡಳಿ ಸದಸ್ಯ ಮೊಹ್ಮದ ಅಸ್ಗರ್ ಚುಲ್ಬುಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಸದಸ್ಯರ ಸಭೆಯಲ್ಲಿ ಕೆಲವರು ಖರ್ಗೆ ವಿರುದ್ಧ ಕಿಡಿಕಾರಿದ್ದರು.ಅವರನ್ನು ಸೋಲಿಸಲು ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದೂ ಹೇಳಿದ್ದರು.ಆದರೆ, ಇದು ಅವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅಂದಿನ ಸಭೆಯಲ್ಲಿದ್ದ ಬಹುಪಾಲು ಸದಸ್ಯರು ಇದನ್ನು ಒಪ್ಪಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮಾರ್ಚ್ 16ರಂದು ನವದೆಹಲಿಯಲ್ಲಿ ಕೌನ್ಸಿಲ್ನ ರಾಜಕೀಯ ಸಲಹಾಸಮಿತಿ ಸಭೆ ನಡೆಯಿತು. ಈ ಬಾರಿ ಕೂಡ ಕೋಮುವಾದಿ ಪಕ್ಷದ ವಿರುದ್ಧವಾಗಿಯೇ ಮತ ಹಾಕುವಂತೆ ಕೌನ್ಸಿಲ್ ನಿರ್ಣಯ ಕೈಗೊಂಡಿದೆ. ವಿಶೇಷವಾಗಿ, ಕಲಬುರ್ಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಮತ ಹಾಕಲು ನಿರ್ಧರಿಸಲಾಗಿದೆ. ಈ ಬಗ್ಗೆ ಯಾರೂ ಗೊಂದಲಕ್ಕೀಡಾಗಬಾರದು’ ಎಂದು ತಿಳಿಸಿದರು.
ಕೌನ್ಸಿಲ್ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾನಾ ಗೌಸೊದ್ದಿನ್ ಕಾಸ್ಮಿ, ಮುಖಂಡ ನಜೀರ್ ಉಸ್ತಾದ್ ತಿಮ್ಮಾಪುರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.