ಕಲಬುರ್ಗಿ: ‘ಉತ್ತರ ಕರ್ನಾಟಕ ಭಾಗದಲ್ಲಿ ಸೌಲಭ್ಯ ವಂಚಿತ ಸಮಾಜಗಳಿಗೆ ಧ್ವನಿಯಾಗಲು ನಮ್ಮ ಪಕ್ಷ ಕೆಲಸ ಮಾಡಲಿದೆ’ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದರು. ಇಲ್ಲಿನ ಕನ್ನಡ ಭವನದಲ್ಲಿ ಅನುಪಮಾ ಶೆಣೈ ಅಭಿಮಾನಿ ಬಳಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಭ್ರಷ್ಟಾಚಾರ ಮುಕ್ತ ಭಾರತ– ಎದುರಿಸುವ ಸವಾಲುಗಳು’ ಕುರಿತ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನವೆಂಬರ್ 1ರಂದು ನೂತನ ರಾಜಕೀಯ ಪಕ್ಷ ಸ್ಥಾಪನೆ ಮಾಡಲಾಗುವುದು. ಪಕ್ಷದ ಹೆಸರನ್ನು ಅಂದೇ ಪ್ರಕಟಿಸಲಾಗುವುದು. ಸಾರ್ವಜನಿಕರ ಪರವಾಗಿ ನಿಸ್ಪಕ್ಷಪಾತವಾಗಿ ಕೆಲಸ ಮಾಡಲು ನಮ್ಮ ಪಕ್ಷದಿಂದ 60ರಿಂದ 70 ಅಭ್ಯರ್ಥಿಗಳನ್ನು ವಿಧಾನಸಭೆಗೆ ಆರಿಸಿ ಕಳುಹಿಸಿ. ಭ್ರಷ್ಟಾಚಾರ, ಕೋಮುವಾದಿ ಪಕ್ಷಗಳಿಗೆ ಬುದ್ಧಿ ಕಲಿಸಿ ನಮ್ಮ ಪಕ್ಷಕ್ಕೆ ಜನರು ಅಧಿಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.
‘ನ್ಯಾಯಾಂಗ, ಪೊಲೀಸ್, ಚುನಾವಣೆ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಅಗತ್ಯವಿದೆ. ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ, ಆರ್ಥಿಕ ವ್ಯವಸ್ಥೆಯನ್ನು ಉತ್ತಮಗೊಳಿಸುವುದು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಕಾಯ್ದುಕೊಳ್ಳುವುದು ನಮ್ಮ ಪಕ್ಷದ ಪ್ರಮುಖ ಉದ್ದೇಶವಾಗಿದೆ’ ಎಂದರು.
ಪ್ರಗತಿಪರ ಚಿಂತಕಿ ಡಾ.ನಾಗರತ್ನ ಬಿ. ದೇಶಮಾನೆ, ಬಹುಜನ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಎಸ್.ಕೋರಿ ಮಾತನಾಡಿದರು. ಅಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷೆ ಮಹಾದೇವಿ ಪಾಟೀಲ, ಪ್ರಗತಿಪರ ಚಿಂತಕ ಸುರೇಶ ಬಡಿಗೇರ, ವಕೀಲೆ ಅನುರಾಧ ಎಂ.ದೇಸಾಯಿ, ಜಿಲ್ಲಾ ಕಾನೂನು ಸಲಹೆಗಾರ್ತಿ ಮಾಲತಿ ಎಸ್.ರೇಶ್ಮಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನಾಗಲಿಂಗಯ್ಯ ಮಠಪತಿ, ದಲಿತ ಮುಖಂಡ ಡಾ.ಬಸವರಾಜ ದೊಡ್ಮನಿ, ಡಾಕ್ವಾ ಗ್ರೂಪ್ ಅಧ್ಯಕ್ಷೆ ರಾಜಶ್ರೀ ದೇಶಮುಖ, ಕನ್ನಡ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಸಿಂಗ ತಿವಾರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.