ಚಿಂಚೋಳಿ: ತಾಲ್ಲೂಕಿನ ಪಸ್ತಪುರ ಗ್ರಾಮದಲ್ಲಿ ಕುಡಿವ ನೀರಿಗೆ ತತ್ವಾರ ಎದುರಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮಾಮೂಲಾಗಿದೆ.
ಪಸ್ತಪುರ ಮತ್ತು ಪಸ್ತಪುರ ತಾಂಡಾಕ್ಕೆ ಕುಡಿವ ನೀರು ಪೂರೈಸಿ ಸಮಸ್ಯೆಗೆ ಶಾಸ್ವತ ಪರಿಹಾರ ಕಲ್ಪಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಜನರು ನೆರೆಯ ಗ್ರಾಮಗಳಿಗೆ ಹೋಗಿ ನೀರು ತರುವುದು ತಪ್ಪಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ರಾಮಪ್ಪ ಶೇರಿಕಾರ ತಿಳಿಸಿದ್ದಾರೆ.
ವಿಶ್ವ ಬ್ಯಾಂಕ್ ನೆರವಿನ ಜಲ ನಿರ್ಮಲ ಯೋಜನೆಯ ಅಡಿಯಲ್ಲಿ ಚಿಮ್ಮನಚೋಡ್ ಬಳಿ ಮುಲ್ಲಾಮಾರಿ ನದಿಯಲ್ಲಿ ಜಾಕ್ವೆಲ್ ನಿರ್ಮಿಸಿ ಅಲ್ಲಿಂದ ಕೊಳವೆ ಮೂಲಕ ಪಸ್ತಪುರ ಗ್ರಾಮಕ್ಕೆ ನೀರು ಪೂರೈಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ 5 ವರ್ಷ ಗತಿಸಿದರೂ ಯೋಜನೆಯಿಂದ ನೀರು ನೀಡಲು ಸಾಧ್ಯವಾಗಿಲ್ಲ. ಪಸ್ತಪುರ ತಾಂಡಾಕ್ಕೆ ಬಹುಗ್ರಾಮ ಕುಡಿವ ನೀರಿನ ಯೋಜನೆ ರೂಪಿಸಿ ₹5 ಕೋಟಿ ಖರ್ಚು ಮಾಡಿದ್ದಾರೆ. ಆದರೆ ತಾಂಡಾಕ್ಕೆ ನೀರು ಬರುತ್ತಿಲ್ಲ ಎಂಬುದು ಸ್ಥಳೀಯರ ಅಳಲಾಗಿದೆ.
ಪ್ರಸ್ತುತ ತಾಂಡಾದಲ್ಲಿ 2 ಕಿರು ನೀರು ಪೂರೈಕೆ ಯೋಜನೆ ಒಂದು ಕೊಳವೆ ನೀರು ಪೂರೈಕೆ ಯೋಜನೆ ಇದ್ದರೂ ಜನರ ದಾಹ ನೀಗಿಸಲು ನೀರು ಲಭಿಸುತ್ತಿಲ್ಲ. ಅಂತರ್ಜಲ ಮಟ್ಟ ಕುಸಿತದಿಂದ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳು ಬತ್ತಿಹೋಗಿದ್ದರಿಂದ ಜನ ಮತ್ತು ಜಾನುವಾರು ನೀರಿಗಾಗಿ ಪರದಾಡುವಂತಾಗಿದೆ.
ಪಸ್ತಪುರ ಬಹುಗ್ರಾಮ ಕುಡಿವ ನೀರು ಪೂರೈಕೆಯ ಯೋಜನೆಯ ನೀರು ಶುದ್ಧೀಕರಣ ಘಟಕದಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.