ADVERTISEMENT

ಪಾದಚಾರಿ ರಸ್ತೆಗೆ ಸುಟ್ಟ ಮರಳು ಬಳಕೆ

ಕಲಬುರ್ಗಿ- ಗುತ್ತಿ ರಾಷ್ಟ್ರೀಯ ಹೆದ್ದಾರಿ- 150ರಲ್ಲಿ ಕಳಪೆ ಫುಟ್‌ಪಾತ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 5:51 IST
Last Updated 2 ಜೂನ್ 2018, 5:51 IST
ಚಿತ್ತಾಪುರ ಸಮೀಪದ ಶಹಾಬಾದ ನಗರದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-150 ಪಕ್ಕದಲ್ಲಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ ಬಳಸುತ್ತಿರುವ ಸಿಮೆಂಟಿನ ಹಾಲೊಬ್ಲಾಕ್.
ಚಿತ್ತಾಪುರ ಸಮೀಪದ ಶಹಾಬಾದ ನಗರದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-150 ಪಕ್ಕದಲ್ಲಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ ಬಳಸುತ್ತಿರುವ ಸಿಮೆಂಟಿನ ಹಾಲೊಬ್ಲಾಕ್.   

ಚಿತ್ತಾಪುರ: ಸಮೀಪದ ಶಹಾಬಾದ ನಗರದ ಬಳಿ ಹಾದು ಹೋಗಿರುವ ಕಲಬುರ್ಗಿ- ಗುತ್ತಿ ರಾಷ್ಟ್ರೀಯ ಹೆದ್ದಾರಿ-150ರ ಪಾದಚಾರಿ ರಸ್ತೆ ಹಾಗೂ ವಿಭಜಕ ನಿರ್ಮಾಣಕ್ಕೆ ಜೆ.ಇ.ಕಾರ್ಖಾನೆಯ ಸುಟ್ಟ ಮರಳು (ಫೌಂಡ್ರಿ ಮರಳು) ಬಳಸಲಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ಕಳೆದ ನಾಲ್ಕು ದಶಕದಿಂದ ಜೆ.ಇ ಕಾರ್ಖಾನೆ ಆಡಳಿತವು ಸುಟ್ಟ ಮರಳನ್ನು ಕಾರ್ಖಾನೆಯ ಸುತ್ತಲಿನ ಪರಿಸರದಲ್ಲಿ ಹಾಕುತ್ತಿದೆ. ಅದು ಮರು ಉಪಯೋಗಕ್ಕೆ ಬಳಸಲು ಯೋಗ್ಯವಲ್ಲ. ಆದರೆ, ಪಾದಚಾರಿ ರಸ್ತೆಗೆ ಇದನ್ನೇ ಹಾಕಲಾಗುತ್ತಿದೆ. ಇದರಿಂದ ಕಾಮಗಾರಿ ಗುಣಮಟ್ಟ ಕಳೆದು ಕೊಳ್ಳುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಇದನ್ನು ನಿಲ್ಲಿಸಬೇಕು’ ಎಂದು ಭಂಕೂರ ಗ್ರಾಮದ ಅಶೋಕ ಮನವಿ ಮಾಡಿದ್ದಾರೆ.

ಭಂಕೂರು ಕ್ರಾಸಿನಿಂದ ಶಹಾಬಾದ- ರಾವೂರ– ವಾಡಿ ಕ್ರಾಸ್‌ವರೆಗೆ ರಸ್ತೆ ಡಿವೈಡರ್, ಚರಂಡಿ, ಅಂಚಿನ ಕರ್ವ್ ನಿರ್ಮಾಣ ಕಾಮಗಾರಿ ಸರಿಯಾಗಿ ಮಾಡಿಲ್ಲ. ಕಳಪೆ ಕಾಮಗಾರಿಯಿಂದ ಬೇಗ ಹಾಳಾಗುವ ಸಾಧ್ಯತೆ ಇದೆ ಎಂಬುದು ಶಹಾಬಾದ ನಗರದ ಸಂತೋಷ ಅವರ ದೂರು.

ADVERTISEMENT

‘ಗುತ್ತಿಗೆದಾರ ನೀಲನಕ್ಷೆ ಪ್ರಕಾರ ಕೆಲಸ ಮಾಡಿಸುತ್ತಿಲ್ಲ. ಪಾದಚಾರಿ ರಸ್ತೆಯ ಕೆಳಗೆ ಮಳೆ ನೀರು ಹರಿದು ಹೋಗಲು ಸರಿಯಾಗಿ ಕೊಳವೆ ಗಳನ್ನು ಅಳವಡಿಸಿಲ್ಲ. ಸಂಬಂಧಿಸಿದ ಎಂಜಿನಿಯರ್‌ಗೆ ತಿಳಿಸಿದರೂ ಗಮನ ಹರಿಸುತ್ತಿಲ್ಲ. ಈಗಲೇ ರಸ್ತೆ ಡಿವೈಡರ್ ಹಾಳಾಗುತ್ತಿದೆ’ ಎನ್ನುತ್ತಾರೆ ಅವರು.

ವಿಭಜಕದಲ್ಲಿ ಹೂವಿನ ಗಿಡಗಳನ್ನು ಬೆಳೆಸಲು ಅನುಕೂಲ ಆಗುವಂತೆ ಮಣ್ಣು ತುಂಬಿಲ್ಲ. ಅಲ್ಲಿಯೂ ಕಲ್ಲಿನ ಚೀಪು ತುಂಬಲಾಗಿದೆ. ಕಲ್ಲಿನ ಗಣಿ ತ್ಯಾಜ್ಯ ತಂದು ಹಾಕಿದ್ದರಿಂದ ಮುಂದೆ ಹೂವಿನ ಸಸಿ, ಗಿಡ ನೆಟ್ಟರೂ ಬೆಳವಣಿಗೆ =ಆಗುವುದಿಲ್ಲ.

ಸಿಮೆಂಟ್ ಬಳಸಿ ಕಾಮಗಾರಿ ಮಾಡಿಸುತ್ತಿದ್ದರಿಂದ ನೀರಿನಿಂದ ನಿಗದಿತ ರೀತಿಯಲ್ಲಿ ಕ್ಯೂರಿಂಗ್ ಮಾಡಬೇಕು. ಆದರೆ, ಗುತ್ತಿಗೆದಾರ ಚರಂಡಿ, ಪಾದಚಾರಿ, ಡಿವೈಡರ್ ಕಾಮ ಗಾರಿಗೆ ಸರಿಯಾಗಿ ನೀರಿನ ಕ್ಯೂರಿಂಗ್ ಮಾಡಿಸುತ್ತಿಲ್ಲ. ಅಧಿಕಾರಿ ಮತ್ತು ಗುತ್ತಿಗೆದಾರ ಇಬ್ಬರೂ ಸೇರಿ ಕಾಮಗಾರಿಯ ಸ್ವರೂಪವನ್ನೇ ಬದಲಾಯಿಸಿದ್ದಾರೆ. ಹಿರಿಯ ಅಧಿಕಾರಿಗಳು, ಜನಪ್ರತಿ ನಿಧಿಗಳು ಇದನ್ನು ಕೂಡಲೇ ಸರಿಪ‍ಡಿ
ಸಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.

**
ಕಳಪೆ ಕಾಮಗಾರಿ ನಡೆದರೂ ಅಧಿಕಾರಿ ಗಮನ ಹರಿಸಿ ಕ್ರಮ ಕೈಗೊಳ್ಳುತ್ತಿಲ್ಲ. ಗುಣಮಟ್ಟದ ಕುರಿತು ಕೇಳಿದರೆ ಅಧಿಕಾರಿ ಗುತ್ತಿಗೆದಾರನ ಪರವಾಗಿ ಮಾತನಾಡುತ್ತಿದ್ದಾರೆ
- ರಾಮಕುಮಾರ ಸಿಂಘೆ, ಮುಖಂಡ, ದಲಿತ ಸಂಘರ್ಷ ಸಮಿತಿ

–ಮಲ್ಲಿಕಾರ್ಜುನ ಮೂಡಬೂಳಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.