ಆಳಂದ: ಪ್ರತಿಯೊಬ್ಬರೂ ಬಾಲ್ಯದಿಂದಲೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ನೇತ್ರ ತಜ್ಞೆ ಡಾ.ರಶ್ಮಿ ಪಾಟೀಲ ಹೇಳಿದರು.
ತಾಲ್ಲೂಕಿನ ಬಂಗರಗಾ ಗ್ರಾಮದಲ್ಲಿ ಭಾನುವಾರ ಬಾಪೂರಾವ ಎ.ಚಿಚಕೋಟೆ ಸ್ಮರಣಾರ್ಥ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನೇತ್ರತಜ್ಞ ಡಾ.ವಿಶ್ವನಾಥ ರೆಡ್ಡಿ ಮಾತನಾಡಿ ‘ಮೊಬೈಲ್, ಟಿ.ವಿ ವೀಕ್ಷಣೆ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳಲ್ಲಿ ದೃಷ್ಟಿದೋಷ ಸಮಸ್ಯೆಗಳು ಕಾಡುತ್ತಿವೆ. ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ ಉತ್ತಮ ಆರೋಗ್ಯದ ಗುಟ್ಟು’ ಎಂದರು.
ಮುಖಂಡ ಸುಭಾಷ ಚಿಚಕೋಟೆ ಮಾತನಾಡಿ ‘ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಸೌಲಭ್ಯಗಳ ಕೊರತೆ ಇದೆ. ಯುವಕರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.
ಮಣಿಕರ್ಣಿಕಾ ಮಹಿಳಾ ಕ್ಲಬ್ ಅಧ್ಯಕ್ಷೆ ಗೌರಿ ರವೀಂದ್ರ ಚಿಚಕೋಟೆ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜಶ್ರೀ ರೆಡ್ಡಿ, ಡಾ.ನೀತು ಕುಮಾರಿ, ಜ್ಯೋತಿ ಉಪಗಾಂವಕರ, ದತ್ತಾತ್ರೇಯ ಬಿರಾದಾರ, ಗುರಣ್ಣಾ ಖಜೂರಿ, ಮಾಣಿಕರಾಯ ಭೂಸನೂರೆ, ಶ್ರೀಮಂತ ಚಿಚಕೋಟೆ, ಶಿವಕುಮಾರ ಚಿಚಕೋಟೆ, ರಿಜ್ವಾನ್ ಬಬಲೇಶ್ವರ, ದೇವಿದಾಸ ಮಕಂದಾರ ಇದ್ದರು.
ಕಲಬುರ್ಗಿಯ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ನಡೆಯಿತು. 318 ಜನರ ನೇತ್ರ ತಪಾಸಣೆ ನಡೆಯಿತು. ಕೆಲವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.