ADVERTISEMENT

ಬಿಜೆಪಿ: ರೇವುನಾಯಕ್‌ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 7:09 IST
Last Updated 25 ಮಾರ್ಚ್ 2014, 7:09 IST

ಗುಲ್ಬರ್ಗ: ಗುಲ್ಬರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ರೇವುನಾಯಕ್‌ ಎಲ್. ಬೆಳಮಗಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ಜಗತ್‌ವೃತ್ತ­ದಿಂದ ಮಿನಿವಿಧಾನಸೌಧ­ದವರೆಗೂ ತೆರೆದ ವಾಹನದಲ್ಲಿ ಮೆರವಣಿಗೆಯೊಂ­ದಿಗೆ ಬಂದರು. ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗಿದರು.

ಲಂಬಾಣಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗ­ವಹಿಸಿದ್ದರು. ಜಗತ್‌ವೃತ್ತದಿಂದ ರಂಗ­ಮಂ­ದಿರ­ದುದ್ದಕ್ಕೂ ಕಾರ್ಯ­ಕರ್ತರ ಸಾಲು ನೆರೆದಿತ್ತು.

ಮುಖ್ತರಸ್ತೆಯು­ದ್ದಕ್ಕೂ ಬಿಜೆಪಿ ಧ್ವಜಗಳು ಗೋಚರಿಸು­ತ್ತಿದ್ದವು. ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಮಗಿ ಅವರು, ‘ಗುಲ್ಬರ್ಗದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳು ತಮ್ಮಿಂದಲೇ ಆಗಿವೆ ಎಂದು ಖರ್ಗೆ ಹೇಳುತ್ತಿದ್ದಾರೆ.

ಕೇಂದ್ರೀಯ ವಿಶ್ವವಿದ್ಯಾಲಯ ರಾಜ್ಯ ಸರ್ಕಾರದಿಂದ ಆಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಎಲ್ಲಕ್ಕೂ ನಾ... ನಾ.. ಎಂದು ಖರ್ಗೆ ಹೇಳುತ್ತಿದ್ದಾರೆ. ಹೀಗೆ ಹೇಳಿಕೊಂಡು ಪ್ರತಿ ಸಲ ಜನರನ್ನು ಮೋಸ ಮಾಡಿ ಗೆದ್ದು ಬಂದಿದ್ದಾರೆ. ಈ ಬಾರಿ ಅವರಿಂದ ಜನರನ್ನು ಮೋಸಗೊಳಿಸುವುದು ಸಾಧ್ಯವಿಲ್ಲ’ ಎಂದರು.

‘ಮೋದಿ ಅವರು ಶ್ರೀಕೃಷ್ಣನ ಅವತಾರದಲ್ಲಿ ಬಂದಿದ್ದು, ದುಷ್ಟರ ಸಂಹಾರವಾಗುವುದು ಖಚಿತ. ಎಲ್ಲ ಕಡೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಾ.. ಎನ್ನುವವರಿಗೆ ಜನರು ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಬಿ. ಶಾಣಪ್ಪ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಸಚಿವ ಸುನೀಲ ವಲ್ಲ್ಯಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಪಾಟೀಲ, ಮುಖಂಡರಾದ ಬಿ.ಜಿ. ಪಾಟೀಲ್‌, ಶಶೀಲ್‌ ನಮೋಶಿ, ಎಂ.ವೈ. ಪಾಟೀಲ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಬೆಳಮಗಿ ಅವರೊಂದಿಗೆ ಜನರಿಗೆ ಕೈ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.