ADVERTISEMENT

ಮನೆ ಬಾಗಿಲಿಗೆ ಮಮತೆಯ ಕರೆಯೋಲೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 8:52 IST
Last Updated 8 ಏಪ್ರಿಲ್ 2014, 8:52 IST

ಗುಲ್ಬರ್ಗ: ಮದುವೆ ಸಮಾರಂಭಗಳಿಗೆ ಮಮತೆ ಯಿಂದ ಆಹ್ವಾನ ಪತ್ರ ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಏ. 17 ರಂದು ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ಜರುಗಲಿರುವ ಗುಲ್ಬರ್ಗ ಮೀಸಲು ಲೋಕಸಭಾ ಕೇತ್ರದ ಸಾರ್ವತ್ರಿಕ ಚುನಾವಣೆಗೂ ಮಮತೆಯ ಕರೆಯೋಲೆ ನೀಡಲಾಗುತ್ತಿದೆ!

ಹೌದು. ಅತಿ ಕಡಿಮೆ ಮತದಾನವಾಗಿದ್ದ ಪ್ರದೇಶಗಳನ್ನು ಗುರುತಿಸಿರುವ ಜಿಲ್ಲಾಡಳಿತ, ಸ್ವೀಪ್ ಸಮಿತಿ ಮೂಲಕ ಆ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಪ್ರತಿಯೊಬ್ಬರಿಗೂ ‘ಮಮತೆಯ ಕರೆಯೋಲೆ’ ನೀಡಲು ಸಜ್ಜಾಗಿದೆ.

ಮದುವೆ, ಗೃಹಪ್ರವೇಶ ಸೇರಿ ಇತರ ಸನ್ನಿವೇಶ ಗಳಲ್ಲಿ ಮುದ್ರಿಸುವ ಆಹ್ವಾನ ಪತ್ರಿಕೆ ಮಾದರಿಯಲ್ಲೇ ಮತದಾನ ಬಗ್ಗೆ ಕರೆಯೋಲೆ ಸಿದ್ಧಪಡಿಸಿ ಮನೆ ಮನೆಗೆ ಹಂಚಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಖುದ್ದು ಮನೆಗಳಿಗೆ ತೆರಳಿ ಆಹ್ವಾನ ಪತ್ರಿಕೆಗಳಿಗೆ ಅರಿಶಿಣ ಕುಂಕುಮ ಹಚ್ಚಿ ಕರೆಯೋಲೆ ಕೈಗಿಡಲಿದ್ದಾರೆ. ಮತದಾನದ ಈ ಕರೆಯೋಲೆಯನ್ನು ಚುನಾವಣಾ ಆಯೋಗದ ಸ್ವೀಪ್‌ ವೀಕ್ಷಕ ರಾಜೀವ್ ಜೈನ್ ಸೋಮ ವಾರ ನಗರದಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಟಿ.ಎಚ್.ಎಂ. ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ರಾಧಾಕೃಷ್ಣ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಸ್.ಎಂ.ಅರ್ಚನಾ ಇದ್ದರು.

ನಂದಿನಿ ಪ್ಯಾಕೆಟ್‌ನಲ್ಲೂ ಜಾಗೃತಿ
ಗುಲ್ಬರ್ಗ:-
ಗುಲ್ಬರ್ಗ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳ ಹಾಲು ಒಕ್ಕೂಟ ದಿಂದ ಪ್ರತಿದಿನ ಮಾರಾಟ ವಾಗುವ 64 ಸಾವಿರ ಲೀಟರ್ ಹಾಲಿನ ಪ್ಯಾಕೆಟ್‌ ಗಳ ಮೇಲೆ ‘ಮತದಾನ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ’ ಎಂದು  ಮುದ್ರಿಸಿ ಭಾನುವಾರದಿಂದ ಮಾರಾಟ ಮಾಡಲಾಗುತ್ತಿದೆ.

ಸ್ವೀಪ್ ವೀಕ್ಷಕ ರಾಜೀವ್ ಜೈನ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಟಿ.ಎಚ್.ಎಂ.ಕುಮಾರ್, ವಾರ್ತಾ ಧಿಕಾರಿ ಜಿ.ಚಂದ್ರಕಾಂತ್ ಅವರು ಸೋಮವಾರ ಗುಲ್ಬರ್ಗ ಹಾಲಿನ ಡೇರಿಗೆ ಭೇಟಿ ನೀಡಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಮತದಾನ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ ಮುದ್ರಣವಾಗುವ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬದ್ರಿನಾಥ ಬಿ.ವಡಾಪ್ಪಿ, ಪ್ರಧಾನ ವ್ಯವಸ್ಥಾಪಕಿ ಲಕ್ಷ್ಮೀ ನರಸಪ್ಪ, ಆಡಳಿತಾಧಿ ಕಾರಿ ರಾಜಶೇಖರ್ ಪಾಟೀಲ್ ಹಾಜರಿದ್ದರು.

ಮತಯಂತ್ರ ಸಿದ್ಧತೆ ಪರಿಶೀಲನೆ
ಗುಲ್ಬರ್ಗ: -
ಗುಲ್ಬರ್ಗ ಮೀಸಲು ಲೋಕಸಭಾ ಕೇತ್ರದ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳ ಸಿದ್ಧತೆ ಮತ್ತು ಕೋಣೆಗಳಲ್ಲಿ ಭದ್ರಪಡಿಸುವ ಕಾರ್ಯ ಸೋಮವಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜರುಗಿತು.

ಭಾರತ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕ  ಎಸ್.ಆರ್.ಬ್ರಹಮಣೆ ಅವರು ಗುಲ್ಬರ್ಗ ಉತ್ತರ, ಗುಲ್ಬರ್ಗ ದಕ್ಷಿಣ, ಗುಲ್ಬರ್ಗ ಗ್ರಾಮೀಣ, ಸೇಡಂ ಮತ್ತು ಚಿತ್ತಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಂಡ ವಿದ್ಯುನ್ಮಾನ ಮತಯಂತ್ರಗಳ ಸಿದ್ಧತೆ ಹಾಗೂ ಕೋಣೆಗಳಲ್ಲಿ ಭದ್ರಪಡಿಸುವ ಕಾರ್ಯವನ್ನು ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.