ADVERTISEMENT

ಸಕಾಲಕ್ಕೆ ದ್ರಾಕ್ಷಿ ಬೆಳೆ ನಿರ್ವಹಣೆ ಮಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 8:37 IST
Last Updated 25 ನವೆಂಬರ್ 2017, 8:37 IST

ಅಫಜಲಪುರ: ‘ರೈತರು ದ್ರಾಕ್ಷಿ ಬೆಳೆಯುವುದು ಈಗಿನ ಕಾಲದಲ್ಲಿ ಬಹಳ ಕಷ್ಟಕರ. ವಾತಾವರಣ ಏರುಪೇರಿನಿಂದಾಗಿ ಬೆಳೆಗಳಿಗೆ ರೋಗ ಬರುತ್ತದೆ. ಅದಕ್ಕಾಗಿ ಸಮಯಕ್ಕೆ ಸರಿಯಾಗಿ ದ್ರಾಕ್ಷಿ ಬೆಳೆ ನಿರ್ವಹಣೆ ಮಾಡಬೇಕು’ ಎಂದು ತೋಟಗಾರಿಕೆ ಉಪ ನಿರ್ದೇಶಕ ಮೊಹ್ಮದ ಅಲಿ ತಿಳಿಸಿದರು.

ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ 2017 – 18ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದ್ರಾಕ್ಷಿ ತಾಕುಗಳನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಶಾಳ ಗ್ರಾಮವನ್ನು ಆಯ್ಕೆ ಮಾಡಿಕೊಂಡು ರೈತರಿಗೆ ಸಹಾಯಧನದಲ್ಲಿ ದ್ರಾಕ್ಷಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕಾಗಿ ರೈತರು ಹೊಸ ತಾಂತ್ರಿಕತೆಯನ್ನು ಬಳಸಿ ದ್ರಾಕ್ಷಿ ಬೆಳೆ ನಿರ್ವಹಣೆ ಮಾಡಬೇಕು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕು’ ಎಂದು ಅವರು ತಿಳಿಸಿದರು.

ADVERTISEMENT

ಕರಜಗಿ ಗ್ರಾಮದಲ್ಲಿ ಸಾಮೂಹಿಕ ಕೆರೆಯನ್ನು ವೀಕ್ಷಣೆ ಮಾಡಿದ ಅವರು, ‘ಈ ಕೆರೆಯಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದ್ದು, ಈ ಭಾಗದಲ್ಲಿ ಬರುವ ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದರು.

ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ರಾಜಕುಮಾರ ಗೋವಿನ್‌ ಮಾತನಾಡಿ, ‘ಮಾಶಾಳದಲ್ಲಿ ದ್ರಾಕ್ಷಿ ಬೆಳೆಗಾರರು ಸರ್ಕಾರದ ಸಹಾಯಧನ ಪ್ರಾಮಾಣಿಕವಾಗಿ ಬಳಸಿಕೊಂಡು ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಸಂತೋಷಕುಮಾರ ಲೋಣಿ ಮಾತನಾಡಿ, ಮಾಶಾಳ ಮತ್ತು ಕರಜಗಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಕಾರ್ಯಕ್ರಮದ ಬಗ್ಗೆ ಉಪ ನಿರ್ದೇಶಕರಿಗೆ ಮಾಹಿತಿ ನೀಡಿದರು.

ತಮ್ಮ ಅನುಭವವನ್ನು ಹಂಚಿಕೊಂಡ ದ್ರಾಕ್ಷಿ ಬೆಳೆಗಾರರಾದ ಮಲ್ಲಿಕಾರ್ಜುನ ನಾಮಗೊಂಡ, ನಾಗೇಶ ವಾಲಿ, ಭೀಮಾಶಂಕರ ಹೈದ್ರಾ, ಮಲ್ಲಿಕಾರ್ಜುನ ಖುರ್ಜಿ ದ್ರಾಕ್ಷಿ ನಿರ್ವಹಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.