ADVERTISEMENT

ಸಾಲ, ಮೊಕದ್ದಮೆ ಇಲ್ಲದ ‘ಸಾಗರ’

ಒಡತಿ ಬಳಿ ಬಂಗಾರದ ಒಡವೆಯೂ ಇಲ್ಲ!

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 7:13 IST
Last Updated 25 ಮಾರ್ಚ್ 2014, 7:13 IST

ಗುಲ್ಬರ್ಗ: ಕೆಲವು ದಶಕಗಳ ಹೋರಾಟ ಮೂಲಕ ರಾಜಕೀಯಕ್ಕೆ ಬಂದ ಡಿ.ಜಿ ಸಾಗರ (ಧೂಳಪ್ಪ) ಅವರ ವಿರುದ್ಧ ಈಗ ಯಾವುದೇ ಮೊಕದ್ದಮೆಗಳಿಲ್ಲ. ಅವರಿಗೆ ಸಾಲವೂ ಇಲ್ಲ.  ಅಷ್ಟು ಮಾತ್ರವಲ್ಲ ಖಾಸಗಿ ಶಾಲಾ ಶಿಕ್ಷಕಿ ಆಗಿರುವ ಅವರ ಪತ್ನಿ ಬಳಿ ಬಂಗಾರವೂ ಇಲ್ಲ, ಸಾಗರ ಬಳಿ ಮನೆ ಇಲ್ಲ! ಪತಿ–ಪತ್ನಿಯ ಒಟ್ಟು ಆಸ್ತಿ ಮೌಲ್ಯ 73.49 ಲಕ್ಷ. ಇವರಿಗೆ ಮಗ ತುಷೀತ ಹಾಗೂ ಮಗಳು ತೇಜಸ್ವಿನಿ ಇದ್ದಾರೆ. ಇದು ಅವರು ನಾಮಪತ್ರ ಸಲ್ಲಿಕೆ ವೇಳೆ ನೀಡಿದ ವಿವರಗಳು.

ನಾಮಪತ್ರ:  ಜೆಡಿಎಸ್‌ ಪಕ್ಷದ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಿ.ಜಿ ಸಾಗರ (ಧೂಳಪ್ಪ) ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ಪಕ್ಷದ ಕಚೇರಿಯಿಂದ ಹೊರಟ ಅವರು, ಜಗತ್‌ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ಹಾಗೂ ಡಾ.ಬಿ.ಆರ್‌ ಅಂಬೇಡ್ಕರ್‌ ಪ್ರತಿಮೆಗಳಿಗೆ ಹಾರ ಹಾಕಿದರು. ಬಳಿಕ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಜಿಲ್ಲಾಧಿ­ಕಾರಿ ಕಚೇರಿ (ಚುನಾವಣಾ ಕಚೇರಿ)ಗೆ ಬಂದರು.

ಬಳಿಕ ಮಾಜಿ ಉಪ­ಸಭಾಪತಿ ಡೇವಿಡ್‌ ಸಿಮಿಯೋನ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್‌ (ಗುಲ್ಬರ್ಗ), ನಾಗನಗೌಡ ಪಾಟೀಲ ಕಂದಕೂರ (ಯಾದಗಿರಿ),  ಮುಖಂಡ ಕೇದಾರಲಿಂಗಯ್ಯ ಹಿರೇಮಠ ಅವರ ಜೊತೆ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಎನ್‌.ಪ್ರಸಾದ್‌ ಅವರಿಗೆ ನಾಮಪತ್ರದ ಪ್ರತಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.